ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯ ನಟ ಭವಾನಿ ಸಿಂಗ್ ಅವರು ತಮ್ಮ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಭವಾನಿ ಸಿಂಗ್ ಅವರು ತಮ್ಮ ಗೆಳತಿ ಪಂಕಜಾ ಶಿವಣ್ಣ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಭವಾನಿ ಹಾಗೂ ಪಂಕಜಾ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಭವಾನಿ ಅವರು ಪಂಕಜಾ ಅವರನ್ನು ಪ್ರಪೋಸ್ ಮಾಡಿದ್ದಾರೆ. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಭವಾನಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಐ ಲವ್ ಯೂ ಮತ್ತು ಇದು ಎಲ್ಲದರ ಪ್ರಾರಂಭ ಮತ್ತು ಅಂತ್ಯ. ನನ್ನ ಏಂಜಲ್ನನ್ನು ಮದುವೆಯಾಗಲು ನಾನು ಕಾಯುತ್ತಿದ್ದೇನೆ. ನನ್ನ ಫಾರೆವರ್ ವ್ಯಾಲೆಂಟೈನ್ ನಲ್ಲಿ ಭೇಟಿ ಮಾಡಿ” ಎಂದು ಬರೆದುಕೊಂಡಿದ್ದಾರೆ.
ಈ ಮೊದಲು ಭವಾನಿ ಅವರು ಸ್ನೇಹಿತರ ದಿನಾಚರಣೆಯಂದು ಪಂಕಜಾ ಜೊತೆಗಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಈ ದಿನ ನಮ್ಮ ಸ್ನೇಹಕ್ಕೆ ಎರಡೂವರೆ ವರ್ಷ ಆಗಿದೆ. ನಾನು ನಿನ್ನನ್ನು ಹುಚ್ಚನಂತೆ ಪ್ರೀತಿಸುತ್ತೇನೆ ಹಾಗೂ ಶೀಘ್ರದಲ್ಲೇ ನಾನು ನಿನ್ನನ್ನು ಮದುವೆಯಾಗುತ್ತಿದ್ದೇನೆ. ಈ ವಿಷಯ ಹಂಚಿಕೊಳ್ಳಲು ನನಗೆ ಖುಷಿಯಾಗುತ್ತಿದೆ” ಎಂದು ಪೋಸ್ಟ್ ಮಾಡಿಕೊಂಡಿದ್ದರು.
ಭವಾನಿ ಸಿಂಗ್ ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂ ಪದವಿ ಪಡೆದಿದ್ದಾರೆ. ಭವಾನಿ ಸಿಂಗ್ ‘ಚರಣದಾಸಿ’, ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಲ್ಲದೆ ಖಾಸಗಿ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ‘ರಕ್ಷಾ ಬಂಧನ’ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ.