ಹೈದರಾಬಾದ್: ತೆಲಂಗಾಣದಲ್ಲಿ (Telangana) ಬಿರುಗಾಳಿ ಎಬ್ಬಿಸಿದ್ದ ಫೋನ್ ಟ್ಯಾಪಿಂಗ್ (Phones Tapping) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು 1,200ಕ್ಕೂ ಹೆಚ್ಚು ಫೋನ್ಗಳನ್ನು ಕದ್ದಾಲಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ (Chargesheet) ಸಲ್ಲಿಕೆ ಮಾಡಿದ್ದಾರೆ.
ಆರೋಪಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಶೇಖರಣಾ ಸಾಧನಗಳನ್ನು ಹಾನಿ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂಬ ವಿಚಾರವನ್ನು ಹೈದರಾಬಾದ್ ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಚಾರ್ಜ್ಶೀಟ್ನಲ್ಲಿ ಯಾವೊಬ್ಬ ಬಿಆರ್ಎಸ್ ನಾಯಕರ (BRS Leaders) ಹೆಸರನ್ನು ಉಲ್ಲೇಖಿಸಿಲ್ಲ. ಇದನ್ನೂ ಓದಿ: ಸಿನಿಮಾ ಇಂಡಸ್ಟ್ರಿಯಿಂದಲೇ ದರ್ಶನ್ ಬ್ಯಾನ್ ಮಾಡಬೇಕು: ರೇಣುಕಾಸ್ವಾಮಿ ತಾಯಿ ಆಕ್ರೋಶ
ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ ಪ್ರಣೀತ್ ರಾವ್, ಹೆಚ್ಚುವರಿ ಅಧೀಕ್ಷಕರಾದ ಭುಜಂಗ ರಾವ್ ಮತ್ತು ತಿರುಪತಣ್ಣ, ಮಾಜಿ ಉಪ ಪೊಲೀಸ್ ಆಯುಕ್ತ (ಟಾಸ್ಕ್ ಫೋರ್ಸ್) ರಾಧಾ ಕಿಶನ್ ರಾವ್ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಮಾಜಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಪ್ರಭಾಕರ ರಾವ್ ಮತ್ತು ಸ್ಥಳೀಯ ಮಾಧ್ಯಮ ಸಂಸ್ಥೆಯ ಹಿರಿಯ ಉದ್ಯೋಗಿ ಶ್ರವಣ್ ಕುಮಾರ್ ನಾಪತ್ತೆಯಾಗಿದ್ದಾರೆ.
ಕಳೆದ ವರ್ಷ ಎ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ವಿರೋಧಿ ರಾಜಕೀಯ ಪಕ್ಷಗಳ ನಾಯಕರು, ಸೆಲೆಬ್ರಿಟಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿದಂತೆ ಹಲವಾರು ಉನ್ನತ ವ್ಯಕ್ತಿಗಳ ಫೋನ್ ಕದ್ದಾಲಿಕೆ ಮಾಡಲು ಅನುಮತಿ ನೀಡಿದ್ದು ತೆಲಂಗಾಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. ತನ್ನ ಫೋನನ್ನೇ ಕದ್ದಾಲಿಕೆ ಮಾಡಲಾಗಿದೆ ಎಂದು ಹಾಲಿ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದರು.
ಈ ಸಂಬಂಧ ಮಾರ್ಚ್ 10 ರಂದು ಪ್ರಕರಣ ದಾಖಲಾಗಿದ್ದು, ಹೈದರಾಬಾದ್ ಪೊಲೀಸರು 90 ದಿನಗಳ ಒಳಗಡೆ ಆರೋಪಪಟ್ಟಿ ಸಲ್ಲಿಸಿದ್ದಾರೆ.