ಹೈದರಾಬಾದ್: ಸರ್ಕಾರಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದ್ದು, 16 ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸುರ್ಯಾಪೇಟ್ ಜಿಲ್ಲೆಯ ಮುನಗಾಲ ಮಂಡಲ್ ಗ್ರಾಮದ ಬಳಿ ನಡೆದಿದೆ.
ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್ಆರ್ಟಿಸಿ) ಬಸ್ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಸ್ಟೇಷನರಿ ಲಾರಿಗೆ ಡಿಕ್ಕಿ ಹೊಡೆದಿದೆ. ಆಂಧ್ರ ಪ್ರದೇಶದ ಅವನಿಗಡ್ಡ ಡಿಪೋಯಿಂದ ಬಸ್ ಹೈದರಾಬಾದ್ ಕಡೆಗೆ ಹೊರಟಿದ್ದು, ಮೊಡುಗುಲಾ ಸಮೀಪದ ರಾಷ್ಟ್ರೀಯ ಹೆದ್ದಾರಿ 65 ರಸ್ತೆಯಲ್ಲಿ ಬೆಳಗ್ಗೆ 3 ಗಂಟೆಗೆ ಈ ಅಪಘಾತ ಸಂಭವಿಸಿದೆ.
ರಸ್ತೆಯ ಪಕ್ಕ ಲಾರಿ ನಿಲ್ಲಿಸಿ ಚಾಲಕ ವರಪ್ರಸಾದ್ ಟಯರ್ ಬದಲಾಯಿಸುತ್ತಾ ಲಾರಿ ಕೆಳಗೆ ಇದ್ದನು. ಬಸ್ ಡ್ರೈವರ್ ಮುನಗಾಲ ಮಂಡಲ್ನಲ್ಲಿ ನಿಂತಿದ್ದ ಲಾರಿಯನ್ನು ಗಮನಿಸದೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕಾಲುಗಳು ಲಾರಿ ಕೆಳಗೆ ಸಿಲುಕಿಕೊಂಡಿದೆ. ನಂತರ ಸ್ಥಳಕ್ಕೆ ಕ್ರೇನ್ ಅನ್ನು ಕರೆಸಿ ಮೂರು ಗಂಟೆಯ ನಂತರ ಆತನನ್ನು ಹೊರ ತೆಗೆಲಾಗಿದೆ. ನಂತರ ಚಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುಲಾಯಿತು. ಆದರೆ ಮಾರ್ಗ ಮಧ್ಯೆದಲ್ಲಿಯೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ನ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಸ್ನಲ್ಲಿ ಸುಮಾರು 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಲಾರಿ ಚಾಲಕ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.