ನವದೆಹಲಿ: 2024ರ ಲೋಕಸಭೆ ಚುನಾವಣೆ (Lok Sabha Elections) ಸನಿಹವಾಗುತ್ತಿರುವ ಹಿನ್ನೆಲೆ ಹಲವು ರಾಜಕೀಯ ಪಕ್ಷಗಳು ತಂತ್ರಗಾರಿಕೆ ಆರಂಭಿಸಿದ್ದು, ಇದರ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K Chandrasekhar Rao) ಹೊಸ ರಾಷ್ಟ್ರೀಯ ಪಕ್ಷವನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.
ಅಕ್ಟೋಬರ್ 5 ರಂದು ಸಂಜೆ ಏಳು ಗಂಟೆಗೆ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಲಿದ್ದು, ಡಿಸೆಂಬರ್ 9 ರಂದು ದೆಹಲಿಯಲ್ಲಿ (NewDelhi) ದೊಡ್ಡ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮ ರಾಷ್ಟ್ರೀಯ ಅಜೆಂಡಾವನ್ನು ಚಂದ್ರಶೇಖರ್ ರಾವ್ ಜನರಿಗೆ ತಿಳಿಸಲಿದ್ದಾರೆ. ಇದನ್ನೂ ಓದಿ: ಸೇನೆ ಸೇರಿದ ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್ – ಏನಿದರ ವಿಶೇಷತೆ?
ಮೂಲಗಳ ಪ್ರಕಾರ ತೆಲಂಗಾಣ ರಾಷ್ಟ್ರ ಸಮಿತಿ (TRS) ಅನ್ನು ಭಾರತೀಯ ರಾಷ್ಟ್ರ ಸಮಿತಿ (BRS) ಆಗಿ ಮರು ನಾಮಕರಣ ಮಾಡಲು ಚಂದ್ರಶೇಖರ್ ರಾವ್ ಪಕ್ಷದ ಇತರೆ ನಾಯಕರಿಂದ ಅನುಮತಿ ಪಡೆದುಕೊಂಡಿದ್ದಾರೆ. ಪಕ್ಷದ ಹೆಸರು ಮಾತ್ರ ಬದಲಾಗಲಿದ್ದು, ಚಿಹ್ನೆ ಹಾಗೂ ಧ್ವಜ ಮುಂದುವರಿಯಲಿದೆ. ಇದನ್ನೂ ಓದಿ : ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್ ಎಂದಿದ್ದ ಕೃಷಿ ಸಚಿವ ರಾಜೀನಾಮೆ
ಕೆಸಿಆರ್ ನೇತೃತ್ವದ ಬಿಆರ್ಎಸ್ ಪಕ್ಷವು ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ 100 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಇದು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬಹುದು. ಕೆಲವು ರಾಜಕೀಯ ಪಕ್ಷಗಳು ಬಿಆರ್ಎಸ್ನೊಂದಿಗೆ ವಿಲೀನಗೊಳ್ಳಬಹುದು ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಆರ್ಎಸ್ನೊಂದಿಗೆ ಕೆಲಸ ಮಾಡಲು ಸಿದ್ಧರಿರುವ ಇತರ ನಾಯಕರೂ ಪಕ್ಷ ಸೇರಬಹುದು ಎಂದು ಮೂಲಗಳು ತಿಳಿಸಿವೆ.