ಹೈದರಾಬಾದ್: ತೆಲಂಗಾಣದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ಶನಿವಾರದಿಂದ ಮುಷ್ಕರ ನಡೆಸ್ತಿರುವ ತೆಲಂಗಾಣ ಸಾರಿಗೆ ನಿಗಮದ 48 ಸಾವಿರ ಸಿಬ್ಬಂದಿಯನ್ನು ಸಿಎಂ ಚಂದ್ರಶೇಖರ್ರಾವ್ ವಜಾಗೊಳಿಸಿದ್ದಾರೆ.
ನಿಮ್ಮಿಂದ ಸಾರ್ವಜನಿಕರಿಗೆ ತೊಂದರೆ ಜೊತೆಗೆ, 1200 ಕೋಟಿ ರೂ. ನಷ್ಟವಾಗಿದೆ. ಇವರನ್ನು ಮತ್ತೆ ಸೇವೆಗೆ ವಾಪಸ್ ತೆಗೆದುಕೊಳ್ಳಬೇಡಿ. ಹೊಸದಾಗಿ ತುರ್ತು ನೇಮಕ ಮಾಡಿ ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ಆದೇಶಿಸಿದ್ದಾರೆ. ಈ ಮೂಲಕ ದಸರಾಗೆ ಅಲ್ಲಿನ ಸರ್ಕಾರ ಸಾರಿಗೆ ಇಲಾಖೆ ಸಿಬ್ಬಂದಿಗೆ ಶಾಕ್ ಕೊಟ್ಟಿದೆ.
ಸಿಎಂ ಕೆಸಿಆರ್ ಅವರ ನಿರ್ಧಾರಕ್ಕೆ ತೆಲಂಗಾಣ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಹೆಚ್ಚಾಗಿದೆ. ಸರ್ಕಾರದ ಈ ಆದೇಶದ ವಿರುದ್ಧ ಸಿಬ್ಬಂದಿ ನ್ಯಾಯಾಲಯ ಮೋರೆ ಹೋಗಲು ತೀರ್ಮಾನಿಸಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು. ಅಲ್ಲದೇ ಸಂಸ್ಥೆಗೂ ಭಾರೀ ಪ್ರಮಾಣದಲ್ಲಿ ನಷ್ಟವಾಗಿತ್ತು. ಸಾರಿಗೆ ಸಂಸ್ಥೆಯನ್ನು ಸರ್ಕಾರದೊಂದಿಗೆ ವಿಲೀನ ಮಾಡುವುದು ಸಾರಿಗೆ ಸಿಬ್ಬಂದಿಯ ಪ್ರಮುಖ ಬೇಡಿಕೆಯಾಗಿದೆ. ಸಿಬ್ಬಂದಿಯನ್ನು ವಜಾ ಗೊಳಿಸುವ ಮುನ್ನ ಸರ್ಕಾರ ಶನಿವಾರ ಸಂಜೆ 6 ಗಂಟೆ ಒಳಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿತ್ತು. ಆದರೆ ತಮ್ಮ ಪಟ್ಟು ಸಡಿಲಿಸದ ನೌಕರರು ಪ್ರತಿಭಟನೆಯನ್ನು ಮುಂದುವರಿಸಿದರು.