ಹೈದರಾಬಾದ್: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸದ ಸಾಕು ನಾಯಿ ಸಾವನ್ನಪ್ಪಿದ ಕಾರಣ ಪಶುವೈದ್ಯರೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪಶುವೈದ್ಯ ರಂಜಿತ್ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ. ಕೆ. ಚಂದ್ರಶೇಖರ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಸೇರಿದ್ದ ಸಾಕು ನಾಯಿ 11 ತಿಂಗಳ ಹಸ್ಕಿ ಮೃತಪಟ್ಟಿದ್ದು, ಈ ನಾಯಿಗೆ ಚಿಕಿತ್ಸೆ ನೀಡಿದ್ದ ಡಾಕ್ಟರ್ ವಿರುದ್ಧ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಇದ್ದ ಒಂಬತ್ತು ಸಾಕು ನಾಯಿಗಳ ಪೈಕಿ ಸೆಪ್ಟೆಂಬರ್ 10 ರಂದು ಹಸ್ಕಿ ನಾಯಿ ಆಹಾರವನ್ನು ಸೇವಿಸದೆ ಅನಾರೋಗ್ಯಕ್ಕೆ ಒಳಗಾಗಿತ್ತು. ಮರುದಿನ ಅಲ್ಲಿನ ಸಿಬ್ಬಂದಿ ಪಶುವೈದ್ಯರನ್ನು ಕರೆಸಿ ಪರೀಕ್ಷೆ ಮಾಡಿಸಿದ್ದಾರೆ. ಅವರು ನಾಯಿಗೆ ತುಂಬಾ ಜ್ವರ ಬಂದಿದೆ ಎಂದು ಹೇಳಿದ್ದಾರೆ. ಇದ್ದರಿಂದ ನಾಯಿಯನ್ನು ರಂಜಿತ್ ಅವರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಸೆಪ್ಟಂಬರ್ 11 ರಂದು ರಂಜಿತ್ ಅವರು ಆ ನಾಯಿಯನ್ನು ಪರೀಕ್ಷೆ ಮಾಡಿ ಜ್ವರ ಕಡಿಮೆ ಆಗುವಂತೆ ಒಂದು ಇಂಜೆಕ್ಷನ್ನನ್ನು ಕೊಟ್ಟಿದ್ದಾರೆ. ನಂತರ ನಾಯಿ ರಂಜಿತ್ ಅವರ ಆಸ್ಪತ್ರೆಯಲ್ಲೇ ಮೃತಪಟ್ಟಿದೆ. ಈ ಕಾರಣದಿಂದ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಜಿತ್ ಅವರ ವಿರುದ್ಧ ದೂರು ನೀಡರುವ ಪ್ರಗತಿ ಭವನದಲ್ಲಿ ನಾಯಿಗಳನ್ನು ನಿರ್ವಹಣೆ ಮಾಡುವ ನೌಕರ ಆಸಿಫ್ ಅಲಿ ಖಾನ್ ವೈದ್ಯರ ನಿರ್ಲಕ್ಷ್ಯದಿಂದ ನಾಯಿ ಸಾವನ್ನಪ್ಪಿದೆ ಎಂದು ದೂರು ಕೊಟ್ಟ ಕಾರಣ ರಜಿಂತ್ ವಿರುದ್ಧ ಐಪಿಸಿ ಸೆಕ್ಷನ್ 429 (ಬೆಲೆಯುಳ್ಳ ಪ್ರಾಣಿ ಹತ್ಯೆ) ಮತ್ತು 1960ರ ಪ್ರಾಣಿ ತಡೆ ಕಾಯ್ದೆಯ ಸೆಕ್ಷನ್ 11 ರ ಡ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.