ನವದೆಹಲಿ: ಶಾಲಾ ಸಮವಸ್ತ್ರ ಧರಿಸಿದ್ದ ಹುಡುಗರ ಗುಂಪು ಬಸ್ನಲ್ಲಿ ವ್ಯಕ್ತಿಯ ಕತ್ತು ಸೀಳಿ ಕೊಲೆಗೈದು ಪರಾರಿಯಾಗಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.
20 ವರ್ಷದ ವ್ಯಕ್ತಿ ತೀವ್ರವಾದ ಗಾಯದಿಂದ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಗುರುವಾರದಂದು ದೆಹಲಿಯ ರೂಟ್ ನಂಬರ್ 479ರಲ್ಲಿ ಬರ್ದಾಪುರ್ ಕಡೆಗೆ ಹೊರಟಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ.
ಕೊಲೆಗೀಡಾದ ವ್ಯಕ್ತಿ ಲಾಜ್ಪತ್ನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದರು. ಆಶ್ರಮ್ ಚೌಕ್ ಬಸ್ ನಿಲ್ದಾಣಕ್ಕೆ ಬರುವ ವೇಳೆಗೆ ಶಾಲಾ ಸಮವಸ್ತ್ರ ಧರಿಸಿದ್ದ 13-16 ವರ್ಷ ವಯಸ್ಸಿನ ಐದಾರು ಹುಡುಗರು ಬಸ್ ಹತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೊಬೈಲ್ ಕದ್ದರೆಂದು ಜಗಳ: ವಿದ್ಯಾರ್ಥಿಗಳು ತನ್ನ ಮೊಬೈಲ್ ಕದ್ದಿದ್ದಾರೆಂದು ವ್ಯಕ್ತಿ ಆರೋಪಿಸಿದ್ದರು. ಇದರಿಂದ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು. ಈ ವೇಳೆ ಗುಂಪಿನಲ್ಲಿದ್ದ ಶಾಲಾ ಹುಡುಗನೊಬ್ಬ ಆ ವ್ಯಕ್ತಿಯ ಕತ್ತು ಸೀಳಿದ್ದಾನೆ. ನಂತರ ಬಸ್ ಚಾಲಕನನ್ನು ಬೆದರಿಸಿ ಬಸ್ನಿಂದ ಇಳಿದು ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರು. ಆದ್ರೆ ಅಷ್ಟರಲ್ಲಾಗಲೇ ವ್ಯಕ್ತಿ ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ರು ಎಂದು ಉಪ ಪೊಲೀಸ್ ಆಯುಕ್ತರಾದ ರೊಮಿಲ್ ಬಾಮಿಯಾ ಹೇಳಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆಂಭಿಸಿದ್ದಾರೆ. ಹತ್ಯೆಗೆ ಬಳಸಲಾದ ಆಯುಧ ಇನ್ನೂ ಪತ್ತೆಯಾಗಿಲ್ಲ. ಹುಡುಗರು ಧರಿಸಿದ್ದ ಶಾಲಾ ಸಮವಸ್ತ್ರ ಆಧರಿಸಿ ಪೊಲೀಸರು ಲಾಜ್ಪತ್ ನಗರ ಮತ್ತು ಮಥುರಾ ರಸ್ತೆಯ ಸುತ್ತಮುತ್ತಲಿನ 15 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನ ಗುರುತಿಸಿದ್ದಾರೆ. ಅಪರಾಧಿಗಳಿಗಾಗಿ ಶೋಧಕ್ಕಾಗಿ ವಿದ್ಯಾರ್ಥಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.