– ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣು
ಚೆನ್ನೈ: ಹೇರ್ ಸ್ಟೈಲ್ ಚೆನ್ನಾಗಿಲ್ಲ ಎಂದು ತಾಯಿ ಬೈದಿದ್ದಕ್ಕೆ ಮನನೊಂದು ಮಗ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ವಲಸರವಕ್ಕಂ ಪ್ರದೇಶದಲ್ಲಿ ನಡೆದಿದೆ.
ವಲಸರವಕ್ಕಂನ ನಿವಾಸಿ ಶ್ರೀನಿವಾಸನ್(16) ಆತ್ಮಹತ್ಯೆಗೆ ಶರಣಾಗಿದ್ದಾನೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸನ್ ಕಳೆದ ಮೂರು ತಿಂಗಳುಗಳಿಂದ ಕಟಿಂಗ್ ಮಾಡಿಸದೆ ಹೊಸ ಹೇರ್ ಸ್ಟೈಲ್ಗಾಗಿ ಕೂದಲು ಬೆಳೆಸುತ್ತಿದ್ದನು. ಆದರೆ ಮಗನ ಅವತಾರ ಮಾತ್ರ ತಾಯಿಗೆ ಕಿಂಚಿತ್ತು ಇಷ್ಟವಿರಲಿಲ್ಲ. ಹೀಗಾಗಿ ಯಾವಾಗಲೂ ಹೇರ್ ಸ್ಟೈಲ್ ವಿಚಾರಕ್ಕೆ ಶ್ರೀನಿವಾಸನ್ಗೆ ತಾಯಿ ಬೈಯ್ಯುತ್ತಿದ್ದರು.
ಭಾನುವಾರ ಕೂಡ ಹೇರ್ ಸ್ಟೈಲ್ ವಿಚಾರಕ್ಕೆ ತಾಯಿ ಮಗನ ನಡುವೆ ಜಗಳ ನಡೆದಿತ್ತು. ಈ ವೇಳೆ ತಂದೆ ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದರೂ ಜಗಳ ಮಾತ್ರ ನಿಲ್ಲಲಿಲ್ಲ. ಅಲ್ಲದೇ ತಾಯಿ ಬೈದರಲ್ಲ ಎಂದು ಶ್ರೀನಿವಾಸನ್ ಮನನೊಂದಿದ್ದನು. ಬೇಸರದಲ್ಲಿದ್ದ ಶ್ರೀನಿವಾಸನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ರೂಮ್ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಈಗಾಗಲೇ ಶ್ರೀನಿವಾಸನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ತನಿಖೆ ಕೂಡ ಮುಂದುವರಿಸಿದ್ದಾರೆ.