ಮುಂಬೈ: ಭಾರತ ತಂಡ ವಿದೇಶದಲ್ಲಿ ಯಾವುದೇ ತಂಡದ ವಿರುದ್ಧ ಗೆಲುವು ಪಡೆಯಬೇಕಾದರೆ ಅದು ಬ್ಯಾಟಿಂಗ್ನಿಂದ ಮಾತ್ರ ಸಾಧ್ಯ ಎಂಬ ಕಾಲಘಟ್ಟದಿಂದ ಹೊರ ಬಂದಂತೆ ಕಾಣಿಸುತ್ತಿದೆ. ಭಾರತದ ವೇಗಿಗಳು ಕೂಡ ಪಂದ್ಯ ಗೆಲ್ಲಿಸಿಕೊಡಬಲ್ಲರು ಎಂಬುದು ಇದೀಗ ಸಾಧ್ಯವಾಗಿದೆ. ಪ್ರಸ್ತುತ ಭಾರತ ಶಕ್ತಿಯಾಗಿ ವೇಗಿಗಳ ಪಡೆ ಗುರುತಿಸಿಕೊಂಡಿದೆ.
ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ ಮೂರು ವಿಭಾಗಗಳಲ್ಲೂ ಕೂಡ ಬಲಿಷ್ಠವಾಗಿ ಗೋಚರಿಸುತ್ತಿದ್ದ ಆಸ್ಟ್ರೇಲಿಯಾ ತಂಡ ಒಂದು ಕಡೆಯದರೆ, ಬೆಂಕಿ ಚೆಂಡುಗಳನ್ನು ಎಸೆಯುತ್ತಿದ್ದ ಪಾಕಿಸ್ತಾನದ ವೇಗಿಗಳು ಒಂದು ಕಡೆ. ಈ ನಡುವೆ ಭಾರತ ತಂಡ ಬ್ಯಾಟಿಂಗ್ನಲ್ಲಿ ಮಿಂಚಿದರೆ ಮಾತ್ರ ಗೆಲುವು ಎಂಬ ಒಂದು ಸ್ಥಿತಿಯಿತ್ತು. ಈ ಒಂದು ಮಾತನ್ನು 2018ರ ಬಳಿಕ ವೇಗಿಗಳು ಸುಳ್ಳಾಗಿಸುತ್ತಿದ್ದಾರೆ. ಇದನ್ನೂ ಓದಿ: ಟಿ20 ವರ್ಲ್ಡ್ ಕಪ್ – ಅಕ್ಟೋಬರ್ 24ರಂದು ಭಾರತ Vs ಪಾಕಿಸ್ತಾನ
ಭಾರತ ತಂಡದ ವೇಗಿಗಳು 2018ರ ಬಳಿಕ ಕಠಿಣ ಅಭ್ಯಾಸ ಮತ್ತು ತಮ್ಮ ಬೌಲಿಂಗ್ ವೈವಿಧ್ಯತೆಯಿಂದ ವಿಶ್ವಕ್ರಿಕೆಟ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಎದುರಾಳಿ ಯಾವುದೇ ತಂಡವಾಗಿದ್ದರು ಕೂಡ ತಮ್ಮ ವೇಗ ಮತ್ತು ಸ್ವಿಂಗ್ ಬೌಲಿಂಗ್ ಮೂಲಕ ಕೆಡ್ಡತೋಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ 2018ರ ಬಳಿಕ ವಿದೇಶದಲ್ಲಿ ನಡೆದ 22 ಟೆಸ್ಟ್ ಪಂದ್ಯಗಳಲ್ಲಿ ಬಹುಪಾಲು ವಿಕೆಟ್ ವೇಗಿಗಳು ಪಡೆದಿದ್ದಾರೆ. ಅದಲ್ಲದೆ 22 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ಜಯ, 3 ಪಂದ್ಯಗಳಲ್ಲಿ ಡ್ರಾ ಮತ್ತು 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಪಂದ್ಯಗಳಲ್ಲಿ ವೇಗಿಗಳ ಪಡೆ ಭಾರತದ ಗೆಲುವಿನ ಶಕ್ತಿಯಾಗಿ ಗುರುತಿಸಿಕೊಂಡಿದೆ. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್
ಭಾರತ ತಂಡದಲ್ಲಿ ಪ್ರಸ್ತುತ ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಅವರಂತಹ ಟಾಪ್ ಕ್ಲಾಸ್ ವೇಗಿಗಳು ಇದ್ದಾರೆ ಹಾಗಾಗಿ ಕೆಲದಿನಗಳ ಹಿಂದೆ ಇಂಗ್ಲೆಂಡ್ನ ಲಾಡ್ರ್ಸ್ ನಲ್ಲಿ ಅವರದ್ದೇ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಗೆದ್ದು ಬೀಗಿತ್ತು. ಈ ಪಂದ್ಯದಲ್ಲೂ ಕೂಡ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದು ಮಾತ್ರ ವೇಗಿಗಳು. ಹಾಗಾಗಿ ಭಾರತ ಕ್ರಿಕೆಟ್ ಕಂಡ ಉತ್ತಮ ವೇಗದ ಬೌಲಿಂಗ್ ವಿಭಾಗವಾಗಿ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಂಡಿದೆ ಇದು ಉತ್ತಮ ಬೆಳವಣಿಯಾಗಿದೆ.