ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ‘ಗಡಿಯಾರ’ ಚಿಹ್ನೆಯನ್ನು ಉಳಿಸಿಕೊಳ್ಳಲು ಎನ್ಸಿಪಿಯ (NCP) ಅಜಿತ್ ಪವಾರ್ (Ajit Pawar) ನೇತೃತ್ವದ ಬಣಕ್ಕೆ ಸುಪ್ರೀಂ ಕೋರ್ಟ್ (Supreme Court) ಅನುಮತಿ ನೀಡಿದೆ. ಈ ಮೂಲಕ ಶರದ್ ಪವಾರ್ ಬಣಕ್ಕೆ ಕಾನೂನು ಹೋರಾಟದಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ.
ಅಜಿತ್ ಪವಾರ್ ನೇತೃತ್ವದ ಗುಂಪು ಎನ್ಸಿಪಿಯ ‘ಗಡಿಯಾರ’ ಚಿಹ್ನೆಯನ್ನು ಬಳಸದಂತೆ ಶರದ್ ಪವಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ. ತೀರ್ಪಿನ ವೇಳೆ, ಅಜಿತ್ ಪವಾರ್ ಬಣವು ತನ್ನ ಹಿಂದಿನ ಆದೇಶಕ್ಕೆ ಬದ್ಧವಾಗಿರಬೇಕು ಮತ್ತು ಚುನಾವಣಾ ಜಾಹೀರಾತುಗಳಲ್ಲಿ ಹಕ್ಕು ನಿರಾಕರಣೆಗಳನ್ನು ಸೇರಿಸಬೇಕು. ಈ ವಿಷಯದಲ್ಲಿ ನ್ಯಾಯಾಲಯವು ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿದೆ.
ಆದರೆ ಹಕ್ಕು ನಿರಾಕರಣೆಯೊಂದಿಗೆ ಚಿಹ್ನೆಯನ್ನು ಬಳಸಲು ಮತ್ತು ಚುನಾವಣೆ ಮುಗಿಯುವವರೆಗೂ ತನ್ನ ನಿರ್ದೇಶನಗಳನ್ನು ಉಲ್ಲಂಘಿಸದಂತೆ ನ್ಯಾಯಾಲಯ ಸೂಚನೆ ನೀಡಿದೆ. ಆದೇಶವನ್ನು ಉಲ್ಲಂಘಿಸುವ ಉದ್ದೇಶಪೂರ್ವಕ ಪ್ರಯತ್ನವನ್ನು ಕಂಡುಬಂದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸ ಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
2023 ರಲ್ಲಿ, ಅಜಿತ್ ಪವಾರ್ ಬಂಡಾಯವೆದ್ದು ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಸೇರಿದ್ದರು. ಈ ವರ್ಷದ ಆರಂಭದಲ್ಲಿ, ಪಕ್ಷದಲ್ಲಿನ ವಿಭಜನೆಯ ನಂತರ ಚುನಾವಣಾ ಆಯೋಗವು ಎನ್ಸಿಪಿಯ ʻಗಡಿಯಾರʼ ಚಿಹ್ನೆಯನ್ನು ಅಜಿತ್ ಪವಾರ್ ನೇತೃತ್ವದ ಗುಂಪಿಗೆ ನೀಡಿತ್ತು.
ಲೋಕಸಭೆ ಚುನಾವಣೆಗೆ ಮುನ್ನ ‘ಗಡಿಯಾರ’ ಚಿಹ್ನೆಯನ್ನು ಬಳಸುವುದು ನ್ಯಾಯಸಮ್ಮತವಾಗಿದೆ ಎಂಬ ಹಕ್ಕು ನಿರಾಕರಣೆಯನ್ನು ತನ್ನ ಎಲ್ಲಾ ಪ್ರಚಾರ ಸಾಮಗ್ರಿಗಳಲ್ಲಿ ಸೇರಿಸುವಂತೆ ನ್ಯಾಯಾಲಯ NCPಗೆ ನಿರ್ದೇಶನ ನೀಡಿತ್ತು. ರಾಜ್ಯ ವಿಧಾನಸಭೆ ಚುನಾವಣೆಗೂ ಹಿಂದಿನ ಆದೇಶಗಳನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.