ಚಾಮರಾಜನಗರ: ಶಿಕ್ಷಕರ ಒಳಜಗಳ (Teacher’s Internal Fight) ಹಾಗೂ ಸರಿಯಾಗಿ ಪಾಠ ಪ್ರವಚನ ನಡೆಯದ ಆರೋಪದ ಹಿನ್ನೆಲೆ ಚಾಮರಾಜನಗರ (Chamarajanagar) ತಾಲೂಕಿನ ಮರಿಯಾಲ (Mariyala) ಸ.ಹಿ.ಪ್ರಾ.ಶಾಲೆಯಲ್ಲಿ ಯಾವುದೇ ಅಡ್ಮಿಷನ್ ಆಗಿಲ್ಲ. ಇದರಿಂದ ಇಡೀ ಶಾಲೆ ಖಾಲಿಹೊಡೆಯುತ್ತಿದೆ.
ಇಬ್ಬರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ, ಏಳು ಕೊಠಡಿಗಳು ಇರುವ ಈ ಸರ್ಕಾರಿ ಶಾಲೆ ಯಾವುದೇ ವಿದ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿದೆ. ಶಿಕ್ಷಕರ ಒಳ ಜಗಳ, ಸರಿಯಾಗಿ ನಡೆಯದ ಪಾಠ ಪ್ರವಚನ ಆರೋಪದಿಂದಾಗಿ ಶಾಲೆ ಆರಂಭವಾಗಿ ನಾಲ್ಕು ದಿನಗಳು ಕಳೆದರೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿಲ್ಲ. ಸರ್ಕಾರಿ ಶಾಲೆಗೆ ಪ್ರವೇಶ ಪಡೆಯದೇ ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಓವರ್ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್ ಡಿಕ್ಕಿ – ಇಬ್ಬರು ಸಾವು
ಸಮರ್ಪಕ ಬಿಸಿಯೂಟ ನೀಡಲ್ಲ, ಕುಡಿಯುವ ನೀರಿಲ್ಲ, ಸ್ವಚ್ಛತೆ ಇಲ್ಲ, ಶಿಕ್ಷಕರ ಜಗಳದಿಂದ ಶಾಲೆಯ ವಾತಾವರಣ ಹದಗೆಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕಳೆದ ವರ್ಷ 26 ವಿದ್ಯಾರ್ಥಿಗಳಿದ್ದರು. ಈ ಬಾರಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಮೂರು ತಿಂಗಳ ಹಿಂದೆ ಮುಖ್ಯ ಶಿಕ್ಷಕಿ ಸುಶೀಲಾ ಪೊಲೀಸ್ ರಕ್ಷಣೆ ಪಡೆದಿದ್ದರು. ತಮ್ಮೂರ ಶಾಲೆಗೆ ನಿತ್ಯ ಪೊಲೀಸ್ ಕಾವಲಿನಿಂದ ಪೋಷಕರು ಬೇಸತ್ತಿದ್ದರು. ಸರ್ಕಾರಿ ಶಾಲೆಯ ದುರಾವಸ್ಥೆಯಿಂದ ಆಕ್ರೋಶಗೊಂಡು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧದಲ್ಲಿ ಮನಸ್ತಾಪ – ನಿವೃತ್ತ ಇನ್ಸ್ಪೆಕ್ಟರ್ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟುಹಾಕಿದ ಮಹಿಳೆ
ಉಳ್ಳವರು ಖಾಸಗಿ ಶಾಲೆಗೆ ಸೇರಿಸುತ್ತಾರೆ, ಬಡವರು ಕೂಲಿ ಕಾರ್ಮಿಕರು ಏನು ಮಾಡಬೇಕು? ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡಿ ಹದಗೆಟ್ಟಿರುವ ಸರ್ಕಾರಿ ಶಾಲೆಯ ಚಿತ್ರಣ ಬದಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ