ವಿಜಯಪುರ: ಶಾಲಾ ಅವಧಿಯಲ್ಲಿಯೇ ಮಕ್ಕಳಿಗೆ ರಜೆ ನೀಡಿ ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕರು ಗುಂಡು-ತುಂಡು ಪಾರ್ಟಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ. ಹೆಚ್ ಬಿರಾದಾರ್ ಹಾಗೂ 4 ಜನ ಶಿಕ್ಷಕರು ಜಮೀನೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ಈ ಘಟನೆ ಜನವರಿ 31 ರಂದು ನಡೆದಿದ್ದು, ಶಿಕ್ಷಕರ ಈ ಆಟಾಟೋಪಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಈ ವೇಳೆ ನಾನು ಸುರಪೂರದ ದೊರೆ. ನನ್ನನ್ನು ಯಾರು ಕೇಳೋರು? ಎಂದು ಕುಡಿದ ಅಮಲಿನಲ್ಲಿ ಮುಖ್ಯೋಪಾಧ್ಯಾಯ ಬಿರಾದಾರ್ ಅವಾಜ್ ಹಾಕಿದ್ದಾನೆ.
ಶಾಲೆ ಶಿಕ್ಷಕ ಆರ್.ಬಿ ಲಮಾಣಿ ಅವರು ನಿವೃತ್ತಿ ಆದ ಮೇಲೆ ಬಿರಾದಾರ್ ಹಾಗೂ ಸಹ ಶಿಕ್ಷಕರು ಸೇರಿ ಜನವರಿ 31 ರಂದು ಮಧ್ಯಾಹ್ನ ಮಕ್ಕಳಿಗೆ ಶಾಲೆಗೆ ಅನಧಿಕೃತವಾಗಿ ರಜೆ ನೀಡಿ ಎಲ್ಲರೂ ಶಾಲೆಯ ಪಕ್ಕದಲ್ಲೇ ಇದ್ದ ಜಮೀನಿನಲ್ಲೇ ಗುಂಡು-ತುಂಡಿನ ಬಾಡೂಟ ಮಾಡಿ ಮದ್ಯದ ಅಮಲಿನಲ್ಲಿ ತೇಲಿದ್ದಾರೆ. ಇದೇ ವೇಳೆ ಮಕ್ಕಳಿಂದ ಮಾಹಿತಿ ಪಡೆದು ಗುಂಡು ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ಹೋದ ಸಾರ್ವಜನಿಕರಿಗೆ ಕುಡಿದ ಅಮಲಿನಲ್ಲಿ ಶಿಕ್ಷಕರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಬಿಇಓ ಗೆ ಹೇಳುತ್ತೇವೆ ಎಂದರೆ ಬಿಇಓ ಗೂ ಕೂಡ ನಿಂದಿಸಿದ್ದಾರೆ. ಕುಡುಕ ಶಿಕ್ಷಕರ ಆಟಾಟೋಪ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನು ಪ್ರಕರಣ ಕುರಿತು ಶಾಸಕ ನಾಡಗೌಡ ಅಮಾನತ್ತಿಗೆ ಆದೇಶ ನೀಡಿದ್ದಾರೆ. ಅಲ್ಲದೇ ಬಿಇಓ ಎಸ್.ಡಿ ಗಂಜಿ, ಅಮಾನತ್ತಿಗೆ ಡಿಡಿಪಿಐಗೆ ಶಿಫಾರಸ್ಸು ಪತ್ರ ರವಾನಿಸಿದ್ದಾರೆ.