ಬಾಗಲಕೋಟೆ: ಬ್ಯಾಗ್ನಲ್ಲಿದ್ದ 500 ರೂ. ಕಾಣದ ಹಿನ್ನೆಲೆ ವಿಧ್ಯಾರ್ಥಿಗಳನ್ನು ಶಿಕ್ಷಕ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ರಾಘಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಅಶ್ವಿನಿ ಅಂಗಡಿ ಮತ್ತು ಶಿಕ್ಷಕ ಚಂದ್ರು ದಾಸರ ಐದನೇ ತರಗತಿಯ 10ಕ್ಕೂ ಹೆಚ್ಚು ವಿಧ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಬೆನ್ನು, ತೊಡೆ, ಸೊಂಟದ ಭಾಗದಲ್ಲಿ ಬಾಸುಂಡೆಗಳು ಕಾಣಿಸಿಕೊಂಡಿವೆ.
ವಿದ್ಯಾರ್ಥಿಗಳು ಹಣ ಕದ್ದಿದ್ದಾರೆ ಎಂದ ಆರೋಪಿಸಿ ಸಾಮೂಹಿಕವಾಗಿ ವಿದ್ಯಾರ್ಥಿಗಳಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಪೋಷಕರು ಶಿಕ್ಷಕ ಚಂದ್ರು ದಾಸರ ಮತ್ತು ಶಿಕ್ಷಕಿ ಅಶ್ವಿನಿ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಈ ಘಟನೆ ನಡೆದಿದ್ದು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ ವಿಷಯ ಮುಂದುವರೆಸದೆ ಮುಚ್ಚಿ ಹಾಕಲಾಗಿದೆ. ಇಬ್ಬರೂ ಶಿಕ್ಷಕ ಶಿಕ್ಷಕಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.