ರಾಯಚೂರು: ತುಂಟತನ ಮಾಡುತ್ತಿದ್ದ ವಿದ್ಯಾರ್ಥಿ ಎಲ್ಲೂ ಹೋಗದಂತೆ ಶಿಕ್ಷಕನೋರ್ವ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಬಂಧಿಸಿಟ್ಟಿದ್ದ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.
ಜಿಲ್ಲೆಯ ಬಡಿಬೇಸ್ ಪ್ರದೇಶದಲ್ಲಿರುವ ಮದರಸಾ ಏ ಅರಬ್ಬಿಯಾ ದಾರೂಲ್ ಉಲೂಮ್ ಮೊಹಮ್ಮದಿಯಾ ಮದರಸಾದ ಶಿಕ್ಷಕ ಆಸೀಫ್, 10 ವರ್ಷದ ಖದೀರ್ ಎನ್ನುವ ವಿದ್ಯಾರ್ಥಿ ಕಾಲಿಗೆ ಸರಪಳಿ ಹಾಕಿ ಮದರಸಾದಲ್ಲೆ ಬಂಧಿಸಿಟ್ಟಿದ್ದ. ಆದರೆ ಖದೀರ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಸರಪಳಿ ಸಹಿತ ಹೊರಗಡೆ ಬಂದಿದ್ದ.
ರಸ್ತೆಯಲ್ಲಿ ಖದೀರ್ ನನ್ನು ನೋಡಿದ ಮುಸ್ಲಿಂ ಮುಖಂಡರು ವಿದ್ಯಾರ್ಥಿಯನ್ನು ಅಮಾನವೀಯವಾಗಿ ನೋಡಿಕೊಳ್ಳುತ್ತಿದ್ದಿರಾ ಎಂದು ಗಲಾಟೆ ಮಾಡಿ ಮದರಸಾ ಮುಖ್ಯಸ್ಥ ಹುಸೇನ್ ಬಾಷಾನನ್ನು ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಹುಸೇನ್ ಬಾಷಾ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಹಲ್ಲೆ ಆರೋಪದಲ್ಲಿ ಸೈಯದ್ ರಬ್ಬಾನಿ, ಸೈಯದ್ ಸಲೀಂ ಸೇರಿ 6 ಜನರ ವಿರುದ್ಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಖದೀರ್ ಪೊಷಕರು ತಮ್ಮ ಮಗ ತುಂಬಾ ಕಿಟಲೇ ಮಾಡುತ್ತಿದ್ದರಿಂದ ಅವನನ್ನು ಸರಿ ಮಾಡುವಂತೆ ಶಿಕ್ಷಕರಿಗೆ ನಾವೇ ಹೇಳಿದ್ದೇವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv