ಚಿತ್ರದುರ್ಗ: ಶಿಕ್ಷಕನೊಬ್ಬ 6ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನರಸಿಂಹಸ್ವಾಮಿ (52) ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಚಿತ್ರದುರ್ಗದ ಖಾಸಗಿ ಶಾಲೆಯಲ್ಲಿ 28ರಂದು ನಡೆದ ಜಿಲ್ಲಾ ಮಟ್ಟದ ‘ಇನ್ಸ್ ಪೈರ್ ಅವಾರ್ಡ್’ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿನಿಯನ್ನು ನರಸಿಂಹಸ್ವಾಮಿ ಸೋಮವಾರ ಸಂಜೆಯೇ ಕರೆದುಕೊಂಡು ಹೋಗಿದ್ದನು.
ಬೇರೆ ತಾಲೂಕುಗಳಿಂದ ಈ ಕಾರ್ಯಕ್ರಮಕ್ಕಾಗಿ ಬಂದಂತಹ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಜಿಲ್ಲಾ ಡಯಟ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಎಲ್ಲಾ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿನಿಯನ್ನು ಬಿಡದ ಶಿಕ್ಷಕ, ಆಕೆಯನ್ನು ಬೇರೆಡೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ವಿದ್ಯಾರ್ಥಿನಿಯನ್ನು ಬೆದರಿಸಿ ಆಕೆಯನ್ನು ಬೆತ್ತಲೆ ಕೂರಿಸಿ ಅಮಾನವೀಯವಾಗಿ ಈ ಕೃತ್ಯವೆಸಗಿದ್ದಾನೆಂಬ ಆರೋಪ ಕೇಳಿಬಂದಿದೆ.
ಆರೋಪಿ ಶಿಕ್ಷಕ ನರಸಿಂಹಸ್ವಾಮಿ ಮಾಡಿರುವ ಕೃತ್ಯದಿಂದಾಗಿ ಶಿಕ್ಷಣ ಇಲಾಖೆಯು ತಲೆ ತಗ್ಗಿಸುವಂತಾಗಿದೆ. ಹೀಗಾಗಿ ಈ ಪ್ರಕರಣ ಕೇಳಿ ಬಂದ ತಕ್ಷಣ ಚಿತ್ರದುರ್ಗ ಡಿಡಿಪಿಐ ರವಿಶಂಕರರೆಡ್ಡಿಯವರು ಈತನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಶಿಕ್ಷಕ ನರಸಿಂಹಸ್ವಾಮಿಯನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಬಾಲಕಿಯ ತಂದೆಯ ದೂರಿನ ಮೇರೆಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.