ಚಿಕ್ಕಬಳ್ಳಾಪುರ: ಸರ್ಕಾರಿ ಶಾಲಾ ಶಿಕ್ಷಕನೊರ್ವ 5ನೇ ತರಗತಿ ವಿದ್ಯಾರ್ಥಿನಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಂಜನಮೂರ್ತಿ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಶಿಕ್ಷಕ. ಅಂಜನಮೂರ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮವೊಂದರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಬೇಸಿಗೆ ರಜಾ ದಿನಗಳಾದರೂ ಮಧ್ಯಾಹ್ನದ ಬಿಸಿಯೂಟ ಸವಿಯಲು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅಂಜನಮೂರ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಬಿಸಿಯೂಟ ಸವಿದು ಎಲ್ಲಾ ವಿದ್ಯಾರ್ಥಿಗಳು ಹೊರಟರೂ 5ನೇ ತರಗತಿಯ ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸದೇ ಶಿಕ್ಷಕ ಶಾಲೆಯಲ್ಲೇ ಆಕೆಯನ್ನು ಮೈ ಮೇಲೆ ಕೂರಿಸಿಕೊಂಡು ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಈ ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿನಿ ಶಾಲೆಯಿಂದ ಓಡಿ ಹೋಗಿ ಮನೆಯಲ್ಲಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಶಾಲೆ ಬಳಿ ಬಂದ ಪೋಷಕರು ಹಾಗೂ ಗ್ರಾಮಸ್ಥರು ಶಾಲಾ ಶಿಕ್ಷಕ ಅಂಜನಮೂರ್ತಿಗೆ ಹಿಗ್ಗಾಮುಗ್ಗಾ ಥಳಿಸಿ ವಿಶ್ವನಾಥಪುರ ಪೊಲೀಸರಿಗೆ ಓಪ್ಪಿಸಿದ್ದಾರೆ.
ಈ ಬಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.