ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ಶಿಕ್ಷಕಿ ಪರದಾಟ – ವರ್ಗಾವಣೆ ರದ್ದು ಮಾಡದೆ ಸತಾಯಿಸ್ತಿರುವ ಶಿಕ್ಷಣ ಇಲಾಖೆ

Public TV
1 Min Read
rcr teacher transfer collage copy

ರಾಯಚೂರು: ಮೇಲಾಧಿಕಾರಿಗಳ ಎಡವಟ್ಟು ಕೆಲವೊಮ್ಮೆ ಅವರ ಕೆಳಗಿನ ಸಿಬ್ಬಂದಿಗಳಿಗೆ ಹಿಂಸೆಯನ್ನೇ ತಂದಿಡುತ್ತೆ. ಮಾನಸಿಕ ಅಸ್ವಸ್ಥ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಮಾಡುವಂತೆ ಕೋರಿ ರಾಯಚೂರಿನಲ್ಲಿ ಶಿಕ್ಷಕಿಯೊಬ್ಬಳು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.

ಶಾಂತಾಲಕ್ಷ್ಮಿ ಅವರು ತಮ್ಮ ಪತಿಯನ್ನು ಕಳೆದುಕೊಂಡು ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿದ್ದು, ಈಗ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದೆ. ನಗರದ ಜಹಿರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮದ ಶಾಲೆ ವರ್ಗಾವಣೆ ಮಾಡಲಾಗಿದೆ.

rcr teacher transfer 2 copy

ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ವಿಧವೆಯಾಗಿದ್ದು, ಬುದ್ಧಿಮಾಂದ್ಯ ಮಗಳನ್ನು ಸಾಕಬೇಕಿರುವುದರಿಂದ ವರ್ಗಾವಣೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಶಿಕ್ಷಕಿ ಕಲಬುರಗಿ ವಿಭಾಗದ ಅಪರ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ನಗರದಲ್ಲಿನ ಶಾಲೆಯಲ್ಲಿದ್ದರೆ ಮಗಳನ್ನು ನೋಡಿಕೊಳ್ಳಬಹುದು ಇಲ್ಲದಿದ್ದರೆ ಕಷ್ಟವಾಗುತ್ತೆ ಎಂದು ಶಿಕ್ಷಕಿ ತಮ್ಮ ನೋವನ್ನು ಹೊರಹಾಕಿದ್ದಾರೆ.

ನಗರದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದಲ್ಲದೇ ಉದ್ದೇಶಪೂರ್ವಕವಾಗಿ ರಿಲೀವ್ ಮಾಡಲಾಗಿದೆ ಎಂದು ಶಿಕ್ಷಕಿ ಶಾಂತಲಕ್ಷ್ಮಿ ಬುದ್ಧಿಮಾಂದ್ಯ ಮಗಳೊಂದಿಗೆ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *