ಮಡಿಕೇರಿ: ಅಂಗನವಾಡಿ ಟೀಚರೊಬ್ಬರ ವಿರುದ್ಧ ಅಂಗನವಾಡಿಯಲ್ಲಿ ಹೋಂಸ್ಟೇ ನಡೆಸುತ್ತಿರುವ ಆರೋಪವೊಂದು ಕೊಡಗು ಜಿಲ್ಲೆಯಲ್ಲಿ ಕೇಳಿಬಂದಿದೆ.
ಮಡಿಕೇರಿ ತಾಲೂಕಿನ ಉಡೋತ್ ಮೊಟ್ಟೆ ಅಂಗನವಾಡಿ ಕೇಂದ್ರದ ಟೀಚರ್ ಪಾರ್ವತಿ ಎಂಬವರ ಮೇಲೆ ಈ ಗಂಭೀರ ಆರೋಪ ಕೇಳಿಬಂದಿದೆ. ಶನಿವಾರ ಸಂಜೆ ವೇಳೆಗೆ ಸುಮಾರು 10 ಮಂದಿ ಪ್ರವಾಸಿಗರನ್ನು ಟೀಚರ್, ಅಂಗನವಾಡಿಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ವಿಷಯವರಿತ ಸ್ಥಳೀಯರು ರಾತ್ರಿ ವೇಳೆಯಲ್ಲಿ ಅಂಗನವಾಡಿಯೊಳಕ್ಕೆ ತೆರಳಿ ಶಿಕ್ಷಕಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರವಾಸಿಗರನ್ನು ರಾತ್ರಿಯೇ ಹೊರಗೆ ಕಳುಹಿಸಿದ್ದಾರೆ. ಈ ಹಿಂದೆಯೂ ಒಂದೆರೆಡು ಬಾರಿ ಪ್ರವಾಸಿಗರು ಅಂಗನವಾಡಿಯಲ್ಲಿ ತಂಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತನ್ನ ಮೇಲಿನ ಆರೋಪವನ್ನು ಇದೀಗ ಅಂಗನವಾಡಿ ಟೀಚರ್ ತಳ್ಳಿ ಹಾಕಿದ್ದು, ಮಕ್ಕಳು ಇದ್ದಿದ್ದರಿಂದ ಬೇರೆ ಕಡೆ ಹೋಂಸ್ಟೇ ಸಿಗದಿದ್ದರಿಂದ ಅಂಗನವಾಡಿಯಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗಿತ್ತು. ಆದ್ರೆ ಹೋಂಸ್ಟೇ ದಂಧೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.