ದಾವಣಗೆರೆ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ತಾಳಲಾರದೇ ತುಂಗಭದ್ರಾ ನದಿಗೆ (Tungabhadra River) ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆಯಾಗಿದೆ.
ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ (Teacher) ಪುಷ್ಪಲತಾ ಮೃತದೇಹ ಇಂದು ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿದೆ.
ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್ ಇಬ್ಬರು ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್ನಲ್ಲಿ ಸಾಲ ಪಡೆದಿದ್ದರು. ಒಂದು ಕಂತು ಬಾಕಿ ಇಟ್ಟುಕೊಂಡಿದ್ದಕ್ಕೆ ಫೈನಾನ್ಸ್ನವರ ಟಾರ್ಚರ್ ಹೆಚ್ಚಾಗಿತ್ತು.
ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರುತ್ತಿದ್ದರು. ಅಷ್ಟೇ ಅಲ್ಲದೇ ಶಾಲೆಯ ಬಳಿಗೂ ಬಂದು ಪೀಡಿಸುತ್ತಿದ್ದರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಫೈನಾನ್ಸ್ನವರು ಪೊಲೀಸ್ ಸ್ಟೇಷನ್ನಲ್ಲಿ ಶಿಕ್ಷಕ ದಂಪತಿ ವಿರುದ್ದ ಕೇಸ್ ಕೂಡ ಹಾಕಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆಸಿದ್ದರು.
ಪೊಲೀಸ್ ಠಾಣೆಗೆ ಕರೆಸಿದ್ದಕ್ಕೆ ಪುಷ್ಪಲತಾ ಮನ ನೊಂದಿದ್ದರು. ಡಿ. 26 ರಂದು ಗಣರಾಜ್ಯೋತ್ಸವ ದಿನದಂದು ಶಾಲೆಯ ಕಾರ್ಯಕ್ರಮ ಮುಗಿಸಿ ನದಿಗೆ ಹಾರಿದ್ದರು. ತುಂಗಭದ್ರಾ ನದಿಯ ಬಳಿಯ ರಾಘವೇಂದ್ರ ಮಠದ ಬಳಿ ಅವರ ಬ್ಯಾಗ್ ಹಾಗೂ ಮೊಬೈಲ್ ಪತ್ತೆ ಆಗಿತ್ತು. ಘಟನೆ ನಡೆದು ಮೂರನೇ ದಿನಕ್ಕೆ ಶವ ಪತ್ತೆಯಾಗಿದೆ.
ಸೋಮವಾರದಿಂದ ಈಜು ಪರಿಣಿತರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಶವಕ್ಕಾಗಿ ಶೋಧ ನಡೆಸುತ್ತಿದ್ದರು. ರಾಘವೇಂದ್ರ ಮಠದಿಂದ 1 ಕಿಲೋ ಮೀಟರ್ ದೂರದಲ್ಲಿ ಜಾಕ್ವೆಲ್ ಬಳಿ ತೆಲುತ್ತಿದ್ದ ಶವವನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: Tumakuru| 4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ – ಹೃದಯಾಘಾತದಿಂದ ವ್ಯಕ್ತಿ ಸಾವು
ತುಂಗಭದ್ರಾ ನದಿಗೆ ಪುಷ್ಪಲತಾ ಹಾರಲು ಹೊರಟಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ನದಿ ದಂಡೆಯ ಬಳಿ ಕುಳಿತು ಆಳವಾಗಿ ಯೋಚಿಸಿ ನದಿಗೆ ದುಮುಕಿದ್ದಾರೆ. ಈ ದೃಶ್ಯ ರಾಘವೇಂದ್ರಸ್ವಾಮಿ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.