ಭೋಪಾಲ್: ಹತ್ತನೆ ತರಗತಿಯ ವಿದ್ಯಾರ್ಥಿಯೊಬ್ಬಳು ತರಗತಿಯಲ್ಲಿ ಕಳೆದುಕೊಂಡಿದ್ದ 70 ರೂ ಹಣವನ್ನು ಪರಿಶೀಲಿಸಲು ಶಾಲೆಯ ಶಿಕ್ಷಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಘಟನೆ ಮಧ್ಯ ಪ್ರದೇಶದ ದಮೋಹ ಶಾಲೆಯಲ್ಲಿ ನಡೆದಿದೆ.
ತರಗತಿಯ ವಿದ್ಯಾರ್ಥಿನಿಯೊಬ್ಬಳು 70 ರೂ. ಕಳೆದು ಕೊಂಡಿರುವ ಕುರಿತು ಶಿಕ್ಷಕಿಗೆ ದೂರು ನೀಡಿದ್ದು, ಇದರಿಂದ ಕೋಪಗೊಂಡ ಶಿಕ್ಷಕಿ ದೂರು ನೀಡಿದ ವಿದ್ಯಾರ್ಥಿ ಪಕ್ಕ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿನಿಯ ಬಳಿ ಹಣ ಇದೆ ಎಂದು ತಿಳಿದು ಆಕೆಯನ್ನು ತರಗತಿಯಲ್ಲೇ ವಿವಸ್ತ್ರಗೊಳಿಸಿದ್ದಾರೆ.
ಶಾಲೆಯ ಅವಧಿ ಮುಕ್ತಾಯದ ನಂತರ ವಿದ್ಯಾರ್ಥಿನಿ ಶಿಕ್ಷಕಿ ಮಾಡಿದ ಕೃತ್ಯದ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕಿಯ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೇ ನೀಡಿರುವ ಜಿಲ್ಲಾ ಶಿಕ್ಷಣ ಅಧಿಕಾರಿ ಪಿ.ಪಿ ಸಿಂಗ್, ಘಟನೆ ಶುಕ್ರವಾರ ನಡೆದಿರುವ ಕುರಿತು ಮಾಹಿತಿ ಲಭಿಸಿದ್ದು, ಈ ಕುರಿತು ಶಿಕ್ಷಕಿ ಜ್ಯೋತಿ ಗುಪ್ತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಘಟನೆ ಕುರಿತು ತನಿಕೆ ಕೈಗೊಂಡ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಸ್ಪಷ್ಟನೆಯನ್ನು ನೀಡಿರುವ ಶಿಕ್ಷಕಿ ಜ್ಯೋತಿ ಗುಪ್ತಾ, ನಾನು 17 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ರೀತಿಯ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬಳಿ ಪರಿಶೀಲನೆ ನಡೆಸಿದ್ದು ನಿಜ, ಆದರೆ ಈ ಸಂದರ್ಭದಲ್ಲಿ ತರಗತಿಯಲ್ಲಿ ಇತರೇ ವಿದ್ಯಾರ್ಥಿಗಳು ಇರಲಿಲ್ಲ ಎಂದು ಹೇಳಿದ್ದಾರೆ.