ಅಗರ್ತಲಾ: ತಂದೆ ಜೊತೆ ಸೇರಿ ಮೇಕೆ ಕದ್ದ ತಪ್ಪಿಗೆ ವ್ಯಕ್ತಿಯೋರ್ವನನ್ನು 41 ವರ್ಷಗಳ ಬಳಿಕ ಪೊಲೀಸರು ಬಂಧಿಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.
ಹೌದು. ಪಶ್ಚಿಮ ತ್ರಿಪುರದಲ್ಲಿ ಮೇಖ್ಲಿಪರ ಚಹಾ ತೋಟದಲ್ಲಿ ಕೆಲಸ ಮಾಡುವ ಬಚು ಕೌಲ್(58) ಬಂಧಿತ ಆರೋಪಿ. 1978ರಲ್ಲಿ ತ್ರಿಪುರದ ರಣೀರ್ ಬಜಾರ್ನಲ್ಲಿ ಬಚು ಕೌಲ್ ತನ್ನ ತಂದೆ ಮೋಹನ್ ಕೌಲ್ ಜೊತೆ ಸೇರಿ ಒಂದು ಮೇಕೆಯನ್ನು ಕದ್ದಿದ್ದನು. ಆದ್ದರಿಂದ ತಂದೆ ಮಗನ ವಿರುದ್ಧ ದೂರು ದಾಖಲಾಗಿತ್ತು. ಆ ಬಳಿಕ ತಂದೆ, ಮಗ ಇಬ್ಬರೂ ಕಾಣೆಯಾಗಿದ್ದರು.
18 ವರ್ಷದ ಹಿಂದೆ ಆರೋಪಿ ತಂದೆ ತೀರಿಹೋದರು. ಆದರೂ ಕೂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಡುತ್ತಲೇ ಇದ್ದರು. 1978ರಲ್ಲಿ ಬಚು ಕದ್ದ ಮೇಕೆಯ ಬೆಲೆ 45 ರೂ. ಆಗಿತ್ತು. ಆದರೆ ಪ್ರಸ್ತುತವಾಗಿ ಅದರ ಬೆಲೆ 3 ಸಾವಿಕ್ಕೂ ಹೆಚ್ಚಿದೆ ಎಂದು ಪೊಲೀಸರು ಹೇಳಿದ್ದರು.
ಆದರೆ ಬರೋಬ್ಬರಿ 41 ವರ್ಷಗಳ ಬಳಿಕ ಮೇಕೆ ಕದ್ದ ತಪ್ಪಿಗೆ ಬಚು ಪೊಲೀಸರ ಕೈಗೆ ಸಿಕ್ಕಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಸದ್ಯದಲ್ಲೇ ಆತನನ್ನು ಕೆಳ ನ್ಯಾಯಾಲಯಕ್ಕೆ ಒಪ್ಪಿಸಿ, 7 ದಿನ ನ್ಯಾಯಾಂಗ ಬಂಧನಕ್ಕೆ ಕೊಡುವಂತೆ ಕೋರುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.