ನವದೆಹಲಿ: ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಬೇಕು. ನಾವು ಯಶಸ್ವಿಯಾಗಬೇಕೆಂದು ಇಡೀ ರಾಷ್ಟ್ರ ಬಯಸುತ್ತಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಬುಧವಾರ ಏರ್ ಇಂಡಿಯಾ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದರು.
ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾವನ್ನು ಬಿಡ್ ಮೂಲಕ ಗೆದ್ದು ಸ್ವಾಧೀನಪಡಿಸಿಕೊಂಡಿರುವ ಟಾಟಾ ಗ್ರೂಪ್ಸ್ ಇದೀಗ ತಂತ್ರಜ್ಞಾನ ಹಾಗೂ ಸೇವೆಯಲ್ಲಿ ಅತ್ಯುತ್ತಮವಾಗಿಸುವ ಬಗ್ಗೆ ಭವಿಷ್ಯದ ನೀಲನಕ್ಷೆ ಸಿದ್ಧಪಡಿಸುತ್ತಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್
ಏರ್ ಇಂಡಿಯಾ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಒಪ್ಪಂದದ ಪ್ರಕಾರ ಕಂಪನಿ ಅವರನ್ನು 1 ವರ್ಷದ ವರೆಗೆ ಉಳಿಸಿಕೊಳ್ಳಬೇಕಾಗಿದೆ. ಏರ್ ಇಂಡಿಯಾ ಟಾಟಾ ಗ್ರೂಪ್ಗೆ ಸೇರ್ಪಡೆಗೊಳ್ಳುವುದರೊಂದಿಗೆ 130 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿನಿಧಿಸುವ ಬ್ರಾಂಡ್ ಆಗಲು ನಮಗೆ ಈಗ ಅವಕಾಶವಿದೆ ಎಂದು ಹೇಳಿದರು.
ಏರ್ ಇಂಡಿಯಾ ಆನ್-ಟೈಮ್ ಕಾರ್ಯಕ್ಷಮತೆಯಲ್ಲಿ ಬುಕ್ಕಿಂಗ್, ಬೋರ್ಡಿಂಗ್, ಲಾಂಜ್, ಗ್ರಾಹಕರ ಕುಂದು ಕೊರತೆ ನಿರ್ವಹಣೆಗೆ ತಡೆ ರಹಿತ ಅನುಭವ ನೀಡುತ್ತದೆ. ಪ್ರಯಾಣಿಕರು, ಸಿಬ್ಬಂದಿ, ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿ ಸೇರಿದಂತೆ ಎಲ್ಲರ ಸುರಕ್ಷತೆ ಅತಿ ಮುಖ್ಯವಾಗಿರುತ್ತದೆ ಎಂದು ಚಂದ್ರಶೇಖರನ್ ತಿಳಿಸಿದರು. ಇದನ್ನೂ ಓದಿ: ಫೇಸ್ಬುಕ್ ಉದ್ಯೋಗಿಗಳು ಇನ್ನು ಮುಂದೆ ಮೆಟಾಮೇಟ್ಸ್: ಜುಕರ್ಬರ್ಗ್
ನಾವು ಆರ್ಥಿಕವಾಗಿ ಸದೃಢರಾಗಿರುವಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಮಾಡುವ ಕಾರ್ಯ ಬಹಳ ದೊಡ್ಡದಾಗಿದೆ. ಇದು ಅತ್ಯಂತ ರೋಮಾಂಚನಕಾರಿ ಪ್ರಯಾಣವಾಗಲಿದೆ. ಈ ಯಶಸ್ಸನ್ನು ಇಡೀ ರಾಷ್ಟ್ರ ಬಯಸುತ್ತಿದೆ ಎಂದು ಹೇಳಿದರು.