ಗದಗ: ಹಿಂಬದಿಯಿಂದ ಟಾಟಾಏಸ್ ವಾಹನಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಟಾಟಾಏಸ್ ಪಲ್ಟಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಅಡವಿಸೋಮಾಪುರ ಬಳಿ ನಡೆದಿದೆ.
ಹುಬ್ಬಳ್ಳಿ-ಗದಗ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿನಲ್ಲಿ ಈ ಅವಘಡ ಸಂಭವಿಸಿದ್ದು, ಧಾರವಾಡನಿಂದ ಗದಗ ಮಾರ್ಗವಾಗಿ ಹೊಸಪೇಟೆಗೆ ಹೊರಟಿದ್ದ ಕಾರ್ ಮತ್ತು ತಾಲೂಕಿನ ಬೆಳದಢಿಯಿಂದ ಪಾಪನಾಶಿ ಗ್ರಾಮಕ್ಕೆ ಹೊರಟಿದ್ದ ಟಾಟಾಏಸ್ ನಡುವೆ ಡಿಕ್ಕಿ ಸಂಭವಿಸಿದೆ. ಕಾರ್ ವೇಗವಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾಏಸ್ ಪಲ್ಟಿಯಾಗಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಕಾರ್ ಚಾಲಕ ಬಜಾವ್ ಆಗಿದ್ದಾನೆ. ಇದನ್ನೂ ಓದಿ: ಮೊಬೈಲ್ ಕೊಳ್ಳಲು ಹಣಕ್ಕಾಗಿ ತಾತನನ್ನೇ ಕೊಲೆಗೈದ ಮೊಮ್ಮಗ!
ಇಬ್ಬರು ಮಕ್ಕಳು ಸೇರಿ ಒಟ್ಟು 12 ಜನರು ಟಾಟಾಏಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ರಸ್ತೆ ಅಪಘಾತಕ್ಕೊಳಗಾದ ಮಹಿಳೆಯರು ನಡುರಸ್ತೆಯಲ್ಲಿ ಕೆಲಕಾಲ ನರಳಾಡುವಂತಾಯಿತು. ನಂತರ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಸೇರಿ ಎರಡು ವಾಹನಗಳನ್ನು ಮೇಲಕ್ಕೆತ್ತಿ ರಸ್ತೆ ಪಕ್ಕಕ್ಕೆ ಸರಿಸಿದರು. ಕಾರ್ ಚಾಲಕನನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ತಂಗಿಯ ಗಂಡನ ಜೊತೆಗೆ ಅಕ್ಕನ ಅನೈತಿಕ ಸಂಬಂಧ – ಆಡಿಯೋ ಲೀಕ್