ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗುತ್ತಿದೆ. ಕಾನೂನು ಪರಿಧಿಯಲ್ಲಿ ಕಟ್ಟಿ ಹಾಕುವ ಪ್ರಯತ್ನ ವಿಫಲವಾಗಿದ್ದರಿಂದ ಕೆಲ ಕಡೆ ಪ್ರತಿಭಟನೆ ಕೂಡ ನಡೆದಿದೆ. ಈ ನಡುವೆಯೇ ಮೇ 05 ರಂದು ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಕುರಿತು ಕನ್ನಡದ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ (Taara) ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ತಾರಾ, ‘ಸಿನಿಮಾ ಸತ್ಯದ ದರ್ಶನ ಮಾಡಿಸುತ್ತದೆ ಅಂತಾದರೆ ಯಾಕೆ ಬ್ಯಾನ್ ಮಾಡಬೇಕು? ಸಿನಿಮಾದಲ್ಲಿ ಇರುವ ವಿಷಯವು ತಪ್ಪಾಗಿದ್ದರೆ ಅದನ್ನು ಸೆನ್ಸಾರ್ ಮಂಡಳಿಯು ನೋಡಿಕೊಳ್ಳುತ್ತದೆ. ಸತ್ಯ ಯಾವುದು, ಸುಳ್ಳು ಯಾವುದು ಎನ್ನುವುದನ್ನು ನೋಡುಗರು ತೀರ್ಮಾನಿಸುತ್ತಾರೆ’ ಎಂದಿದ್ದಾರೆ. ಇದನ್ನೂ ಓದಿ:ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್
ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ (Censor) ಮಂಡಳಿಯು ಈಗಾಗಲೇ ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ (Communist)ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.
ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.
ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ (Muslim) ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.