ಬೆಂಗಳೂರು: ರಾಜ್ಯದಲ್ಲಿ ಹಮಾರೆ ಬಾರಾಹ್ (Hamare Baarah) ಚಿತ್ರ ನಿಷೇಧ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ, ಮಾಜಿ ಸಚಿವ ತನ್ವೀರ್ ಸೇಠ್ (Tanveer Sait) ಸ್ವಾಗತ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಮಾರೆ ಬಾರಾಹ್ (Hamare Baarah) ಸಿನಿಮಾ ನಿಷೇಧವನ್ನ ನಾನು ಸ್ವಾಗತಿಸುತ್ತೇನೆ. ಒಂದು ಕೋಮಿನ ಬಗ್ಗೆ ದ್ವೇಷದ ಭಾವನೆ ಬರುವ ರೀತಿ ಮಾಡಿರುವ ಚಿತ್ರ ಅದು. ಈ ಸಿನಿಮಾ ಬಿಡುಗಡೆ ಆಗಬಾರದು ಅಂತ ಸಾಕಷ್ಟು ಪ್ರತಿಭಟನೆ ನಡೆದಿತ್ತು. ಹಲವಾರು ಸಂಘಟನೆಗಳ ಚಿತ್ರ ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಸಂಘಟನೆಗಳ ಮನವಿ ಮೇರಿಗೆ ಸರ್ಕಾರ ನಿಷೇಧಿಸಿದೆ. ಇದನ್ನ ನಾನು ಸ್ವಾಗತಿಸುತ್ತೇನೆ ಎಂದರು.
ನಾನು ಈ ಸಿನಿಮಾವನ್ನ ನೋಡಿಲ್ಲ. ಆದರೆ ಒಂದು ಕೋಮಿನ ಗುರಿಯಾಗಿಸಿ ಧಕ್ಕೆ ಬರುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಹೀಗಾಗಿ ನಿಷೇಧ ಮಾಡಿದ್ದಾರೆ. ಆ ಚಿತ್ರ ಮುಂದೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ಭಾನುವಾರ ಸಂಜೆ 6 ಗಂಟೆಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ
ಇನ್ನು ಪಕ್ಷದಲ್ಲಿ ಹಿರಿಯನ್ನ ಕಡೆಗಣಿಸಲಾಗ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಪಕ್ಷದ ಆಂತರಿಕ ವಿಚಾರ.ಕೆಲವು ವಲಯದಲ್ಲಿ ಅಪಸ್ವರ ಕೇಳ್ತಿದ್ದೇವೆ. ಲೋಕಸಭೆ ಚುನಾವಣೆ ಆದ ಮೇಲೆ ಜವಾಬ್ದಾರಿ ಕೊಟ್ಟ ವಿಚಾರ ಹೀಗೆ ಹಲವು ಚರ್ಚೆ ಆಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಅಪಸ್ವರದ ಬಗ್ಗೆ ಮಾಹಿತಿ ಬಂದಿದೆ. ಪಕ್ಷದ ವಿಚಾರಗಳು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು ಅಂತ ನಾನು ಎಲ್ಲರಿಗೂ ಮನವಿ ಮಾಡ್ತೀನಿ ಎಂದರು.
ಲೋಕಸಭೆ, ವಿಧಾನ ಪರಿಷತ್ ಟಿಕೆಟ್ ವಿಚಾರ ವರಿಷ್ಠರು ಕೊಡುವ ತೀರ್ಮಾನವನ್ನ ನಾವು ಜಾರಿ ಮಾಡ್ತೀವಿ. ಸಿಎಂ, ಡಿಸಿಎಂ ಅವರು ಇಲ್ಲಿನ ನಾಯಕರ ಸಲಹೆ ಪಡೆದು ಲೋಕಸಭೆ, MLC ಚುನಾವಣೆಗೆ ಪಟ್ಟಿ ಕಳಿಸಿರುತ್ತಾರೆ. ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಲಿ ಅಂತ ಅಸಮಾಧಾನಿತರಿಗೆ ತಿಳಿಸಿದರು.