ಚಾಮರಾಜನಗರ: ರಾಜಕಾರಣಿಗಳು ನೀಡುವ ಆಶ್ವಾಸನೆಗಳು ಈಡೇರಿಸುವುದಿರಲಿ, ಮರೆಯದಿದ್ದರೇ ಸಾಕು ಎಂಬ ಸ್ಥಿತಿಯಲ್ಲಿ ಜನರಿದ್ದಾರೆ. ಗಡಿನಾಡ ಕನ್ನಡಿಗರು ತಾವು ನೀಡಿರುವ ಆಶ್ವಾಸನೆಗಳಿಗೆ ಕಾಲನಿಗದಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ಕನ್ನಡಿಗರೇ ಹೆಚ್ಚಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ 4 ಗ್ರಾ.ಪಂ. ಕ್ಷೇತ್ರ, 2 ಗ್ರಾ.ಪಂ ಅಧ್ಯಕ್ಷ ಸ್ಥಾನ ಮತ್ತು ತಾ.ಪಂ.ನ 2 ವಾರ್ಡ್ ಗಳಿಗೆ ಸ್ಪರ್ಧಿಸುತ್ತಿರುವ ಸಂಘಟನೆಯ ಅಭ್ಯರ್ಥಿಗಳು ತಾವು ನೀಡಿರುವ ಆಶ್ವಾಸನೆ 6 ತಿಂಗಳಿನಲ್ಲಿ ಈಡೇರಿಸದಿದ್ದರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆಂದು ಘೋಷಿಸಿಕೊಂಡಿದ್ದಾರೆ.
ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ಒಳಚರಂಡಿ ಮತ್ತು ಸಿಸಿ ರಸ್ತೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿಕೊಡುತ್ತೇವೆ. ಒಂದು ವೇಳೆ ತಾವು ನೀಡಿದ ಆಶ್ವಾಸನೆಗಳನ್ನು 6 ತಿಂಗಳೊಳಗೆ ಈಡೇರಿಸದಿದ್ದಲ್ಲಿ ರಾಜೀನಾಮೆ ನೀಡುತ್ತೇವೆ ಎಂದು ಗಮನ ಸೆಳೆದಿದ್ದಾರೆ.
ವೆಡಿಲ್ ಎಂಬ ಯುವಕರ ಸಂಘಟನೆ ಈಗಾಗಲೇ ಉಚಿತ ಆ್ಯಂಬುಲೆನ್ಸ್ ಸೇವೆ, ಅನಾಥ ಶವಗಳ ಅಂತ್ಯಕ್ರಿಯೆ, ಅಶಕ್ತರಿಗೆ ನೆರವಾಗುವುದು, ಯಾವುದೇ ಲಂಚ ನೀಡದೇ ಸರ್ಕಾರಿ ಕೆಲಸಗಳನ್ನು ದುರ್ಬಲ ವರ್ಗಕ್ಕೆ ಮಾಡಿಸಿಕೊಡುವ ಮೂಲಕ ತಾಳವಾಡಿಯಲ್ಲಿ ಸಕ್ರಿಯವಾಗಿದೆ. ಈಗ ವಿಶಿಷ್ಟ ಪ್ರಣಾಳಿಕೆ ಮೂಲಕ ಎಲ್ಲರನ್ನೂ ಸೆಳೆದಿದ್ದಾರೆ.