ಚೆನ್ನೈ: ಗಾಳಿಪಟದ ದಾರ(ಮಂಜಾ) ಕುತ್ತಿಗೆಗೆ ಸಿಲುಕಿ ಈ ಹಿಂದೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು, ಇದೀಗ ಇವರ ಸಾಲಿಗೆ ಚೆನ್ನೈ ನ ಬಾಲಕಿ ಕೂಡ ಸೇರಿಕೊಂಡಿದ್ದಾಳೆ.
ಹೌದು. ತನ್ನ ಪಾಡಿಗೆ ಕುಳಿತಿದ್ದ 3 ವರ್ಷದ ಬಾಲಕಿಯ ಕುತ್ತಿಗೆಯನ್ನು ಗಾಳಿಪಟದ ದಾರ ಸೀಳಿದೆ. ಬಾಲಕಿ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದಳು. ಈ ವೇಳೆ ಆರ್.ಕೆ ನಗರ ಫ್ಲೈಓವರ್ ಮೇಲಿದ್ದ ವಾಹನದಿಂದ ಬಿದ್ದ ಗಾಳಿಪಟದ ದಾರ ಬಾಲಕಿಯ ಕತ್ತು ಸೀಳಿದೆ. ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬಾಲಕಿ ಬದುಕುಳಿಯಲಿಲ್ಲ.
ಗಾಳಿಪಟದ ದಾರಗಳನ್ನು ಕೆಮಿಕಲ್ ಬಳಸಿ ಡಿಸೈನ್ ಮಾಡಲಾಗುತ್ತಿದೆ. ಈ ದಾರಗಳು ತುಂಬಾನೇ ಶಾರ್ಪ್ ಆಗಿದ್ದು, ಜೀವಕ್ಕೆ ಕುತ್ತು ತರುವಂತಿರುತ್ತವೆ. 2015ರಲ್ಲಿ ಪೊಲೀಸರು ಮಂಜಾ ದಾರ ಮಾರಾಟವನ್ನು ನಿಷೇಧಿಸುವಂತೆ ಆದೇಶ ಹೊರಡಿಸಿದ್ದರು. ಅಲ್ಲದೆ ಆ ಬಳಿಕ ಮಾರಾಟ ಮಾಡಿದ್ದ ಕೆಲವರ ಮೇಲೆ ಕೇಸ್ ಕೂಡ ದಾಖಲಿಸಿದ್ದರು.
ಈ ಹಿಂದೆ ಸಿವಿಲ್ ಎಂಜಿನಿಯರ್ ನನ್ನು ಇದೇ ದಾರ ಬಲಿ ತೆಗೆದುಕೊಂಡಿತು. ರಕ್ಷಾ ಬಂಧನದ ದಿನದಂದು ಮನವ್ ತನ್ನ ಇಬ್ಬರು ಸಹೋದರಿಯರನ್ನು ಹರಿ ನಗರದಲ್ಲಿರುವ ತನ್ನ ಆಂಟಿಯ ಮನೆಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ದೆಹಲಿಯ ಪಶ್ಚಿಮ್ ವಿಹಾರ್ ಫ್ಲೈಓವರ್ ಬಳಿ ಬರುತ್ತಿದ್ದಂತೆಯೇ ಮನವ್ ಕುತ್ತಿಗೆಗೆ ಗಾಜಿನಿಂದ ಲೇಪಿತವಾದ ಚೀನಾ ಗಾಳಿಪಟದ ದಾರ ಸುತ್ತುವರಿದಿದೆ. ಅಲ್ಲದೆ ಮನವ್ ಕುತ್ತಿಗೆಯನ್ನೇ ಸೀಳಿದೆ. ಪರಿಣಾಮ ಶ್ವಾಸನಾಳಕ್ಕೂ ಗಂಭೀರ ಹಾನಿಗೀಡಾಗಿತ್ತು. ಹೀಗಾಗಿ ಮನವ್ ಅವರು ಸ್ಕೂಟರ್ ನಿಲ್ಲಿಸುವ ಮೊದಲೇ ಅದರಿಂದ ಕೆಳಗೆ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.