ಚೆನ್ನೈ: ಕಾಲಿವುಡ್ ಸ್ಟಾರ್ ನಟ ವಿಕ್ರಮ್ ಪುತ್ರ ಧ್ರುವ ವಿಕ್ರಮ್ ಯದ್ವಾ ತದ್ವಾ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಚೆನ್ನೈ ನಗರದಲ್ಲಿ ನಡೆದಿದೆ.
ಧ್ರುವ ವಿಕ್ರಮ್ ಚಾಲನೆ ಮಾಡುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಆಟೋದಲ್ಲಿದ್ದ ವ್ಯಕ್ತಿ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ರೋಯಾಪಟ್ಟ ಆಸ್ಪತೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಚೆನ್ನೈನ ತೇನಂಪೇಟೆಯ ಬಳಿ ಇರುವ ಪೊಲೀಸ್ ಕಮೀಷನರ್ ಮನೆ ಬಳಿಯೇ ಘಟನೆ ನಡೆದಿದ್ದು, ಅಪಘಾತದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆಗೆ ಧ್ರುವ ವಿಕ್ರಮ್ ವಾಗ್ವಾದಕ್ಕಿಳಿದ್ದು, ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧ್ರುವ ವಿಕ್ರಮ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 279 (ನಿರ್ಲಕ್ಷ ಚಾಲನೆ), 337 ಅಡಿ ದೂರು ದಾಖಲಿಸಿದ್ದಾರೆ. ಸದ್ಯ ಧ್ರುವ ವಿಕ್ರಮ್ ಜಾಮೀನು ಪಡೆದು ಠಾಣೆಯಿಂದ ಬಿಡುಗಡೆಗೊಂಡಿದ್ದು, ಅಪಘಾತ ನಡೆದ ವೇಳೆ ಧ್ರುವ ತನ್ನ ಮೂವರು ಸ್ನೇಹಿತರೊಂದಿಗೆ ತೆರಳುತ್ತಿದ್ದ ಎಂದು ವರದಿಯಾಗಿದೆ.
ಅಂದಹಾಗೇ ಧ್ರುವ ವಿಕ್ರಮ್ ತೆಲುಗಿನ `ಅರ್ಜುನ್ ರೆಡ್ಡಿ’ ಸಿನಿಮಾ ತಮಿಳು ರಿಮೇಕ್ ನಲ್ಲಿ ಮೊದಲ ಬಾರಿಗೆ ಕಾಲಿವುಡ್ ನಲ್ಲಿ ನಟರಾಗಿ ಪ್ರವೇಶ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews