ಚಾಮರಾಜನಗರ: ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾರದೆ ತಾಯಿ-ಮಗಳು ಬೆಂಕಿಗೆ ಆಹುತಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗಡಿಭಾಗದ ತಮಿಳುನಾಡಿನ ಮಲ್ಲನಗುಳಿ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡಿದ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ಮಲ್ಲನಗುಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಮಲ್ಲನಗುಳಿಯ ರಾಜಮ್ಮ(40) ಹಾಗೂ ಮಗಳು ಗೀತಾ(19) ಮೃತ ದುರ್ದೈವಿಗಳು.
ಮಲ್ಲನಗುಳಿಯು ಕರ್ನಾಟಕದ ಪ್ರದೇಶದ ಗ್ರಾಮವಾಗಿದ್ದು, ಇಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಪುಟ್ಟ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದ ರಾಜಮ್ಮ ಗುರುವಾರ ಮಧ್ಯಾಹ್ನ ಅಡುಗೆ ಮಾಡುತ್ತಿದ್ದಾಗ ಗುಡಿಸಲಿಗೆ ಕಿಡಿ ತಗುಲಿದೆ. ಪರಿಣಾಮ ಬೆಂಕಿ ಸಂಪೂರ್ಣವಾಗಿ ಗುಡಿಸಲಿಗೆ ಹೊತ್ತಿಕೊಂಡು, ರಾಜಮ್ಮ ಹಾಗೂ ಗೀತಾ ಹೊರಗೆ ಬರಲು ಸಾಧ್ಯವಾಗದೆ ಬೆಂಕಿಗೆ ಆಹುತಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಾಳವಾಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಾಜಮ್ಮ ಹಾಗೂ ಗೀತಾ ಅವರ ಮೃತ ದೇಹಗಳನ್ನು ತಾಳವಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.