ಚೆನ್ನೈ: ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪೋಲೆಂಡ್ ಪ್ರಜೆಯನ್ನು ನಾಗಪಟ್ಟಣಂನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಪೋಲೆಂಡ್ ಪ್ರಜೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ನಾಗಪಟ್ಟನಂನ ಕೊಡಿಮಾರಂ ವನ್ಯಜೀವಿ ಅಭಯಾರಣ್ಯದ ಬಳಿ ರಬ್ಬರ್ ದೋಣಿ ಪತ್ತೆಯಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಬಳಿಕ ಆತನನ್ನು ಹುಡುಕಿ ಬಂಧಿಸಲಾಯಿತು. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ 3 ಬಾರಿ ಕರೆ ಮಾಡಿದ ಬಂಧಿತ ಸಚಿವ ಪಾರ್ಥ ಚಟರ್ಜಿ
ಸಿಕ್ಕಿದ್ದು ಹೇಗೆ?
ರಬ್ಬರ್ ಬೋಟ್ನಲ್ಲಿ ಸಾಕಷ್ಟು ನೀರು, ಈಜು ಫ್ಲಿಪ್ಪರ್ಗಳು ಮತ್ತು ಬೋಟ್ಗೆ ಗಾಳಿ ತುಂಬಲು ಏರ್ ಪಂಪ್ ಇದ್ದ ಕಾರಣ ಪೊಲೀಸರಿಗೆ ಅನುಮಾನ ಬಂದಿತು. ಇದನ್ನು ಪತ್ತೆ ಹಚ್ಚಿದ ನಂತರ, ನಾಗಪಟ್ಟಣಂ ಮತ್ತು ತಿರುವರೂರ್ ಜಿಲ್ಲೆಗಳಲ್ಲಿ ಯಾರಾದರೂ ಅಕ್ರಮವಾಗಿ ತಮಿಳುನಾಡಿಗೆ ಪ್ರವೇಶಿಸಿದ್ದಾರೆಯೇ ಎಂದು ಪತ್ತೆಹಚ್ಚಲು ಕರಾವಳಿ ಪೊಲೀಸರು ಶೋಧ ತಂಡ ರಚಿಸಿದರು.
ಅಧಿಕಾರಿಗಳು ಡ್ರೋನ್ ಬಳಸಿ ಶೋಧ ನಡೆಸುತ್ತಿದ್ದಾಗ, ವೇದಾರಣ್ಯಂ ಪಟ್ಟಣದ ಅರುಕಾಡು ಬಳಿ ವಿದೇಶಿ ಪ್ರಜೆಯೊಬ್ಬರು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್
ಪೊಲೀಸರು ಈ ಕುರಿತು ಮಾತನಾಡಿದ್ದು, ಆ ವ್ಯಕ್ತಿಯನ್ನು ಪೋಲಿಷ್ ಪ್ರಜೆ ಎಂದು ಗುರುತಿಸಲಾಗಿದೆ. ಆತ ಶ್ರೀಲಂಕಾದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಅಲ್ಲಿಂದ ಬಿಡುಗಡೆಯಾದ ನಂತರ, ಆತ ಕೆಲವು ಉಪಕರಣಗಳನ್ನು ಖರೀದಿಸಲು ಭಾರತೀಯ ಕರಾವಳಿಯನ್ನು ತಲುಪಿದ್ದಾನೆ. ಪಾಸ್ಪೋರ್ಟ್ ಇಲ್ಲದೆ ಭಾರತದ ಗಡಿ ಪ್ರವೇಶಿಸಿದ್ದಕ್ಕಾಗಿ ಪೋಲೆಂಡ್ ಪ್ರಜೆಯನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.