ಚೆನ್ನೈ: ಕಾಡಾನೆಯೊಂದು ಏಕಾಏಕಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಗಾಯಗೊಳಿಸಿದ ಘಟನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ನಡೆದಿದೆ.
ನೀಲಗಿರಿ ಜಿಲ್ಲೆಯ ಕೋಲಕೊಂಬೈ ಪ್ರದೇಶದ ಕಾಲೋನಿಯೊಂದಕ್ಕೆ ಕಾಡಾನೆ ನುಗ್ಗಿತ್ತು. ಈ ವೇಳೆ ಚೀಲವನ್ನು ಹೊತ್ತು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ಓಡಿ ಬಂದು ದಾಳಿ ಮಾಡಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಆನೆ ದಾಳಿ ಮಾಡಿದ ದೃಶ್ಯವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾನವ ಹಾಗೂ ಆನೆ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
A student luckily escaped from wild elephant attack near Kolakombai police station in Coonoor in Nilgiris district. @NewIndianXpress pic.twitter.com/EPxjQ5RRWx
— Senthilkumar Subramaniam (@Senthil_TNIE) June 25, 2019
ವಿಡಿಯೋದಲ್ಲಿ ಏನಿದೆ?:
ವ್ಯಕ್ತಿಯೊಬ್ಬರು ರಸ್ತೆ ಮಧ್ಯದಲ್ಲಿ ಚೀಲ ಹೊತ್ತುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ತಿರುಗಿ ನೋಡುತ್ತಿದ್ದಂತೆ ಕಾಡಾನೆ ಕಾಣಿಸುತ್ತದೆ. ಇದರಿಂದ ಗಾಬರಿಗೊಂಡ ಅವರು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ ಅವರ ಎದುರಿಗೆ ಕಾಂಪೌಂಡ್ ಇರುವುದರಿಂದ ಆನೆಯ ದಾಳಿಗೆ ಗುರಿಯಾಗುತ್ತಾರೆ. ಸೊಂಡಿಲಿನಿಂದ ತಿವಿದು ಹಲ್ಲೆ ಮಾಡಿ ಅಲ್ಲಿಂದ ಮುಂದೆ ಹೋಗಿದೆ.
ಇತ್ತೀಚೆಗಷ್ಟೇ ಕಾಡಾನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮಕ್ಕೆ ನುಗ್ಗಿತ್ತು. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.