ಚೆನ್ನೈ: ನನ್ನೊಂದಿಗೆ ಸಂಸಾರ ನಡೆಸಲು ಪತ್ನಿಯನ್ನು ಕಳುಹಿಸಿ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವ್ಯಕ್ತಿಯೊಬ್ಬ ವಿಚಿತ್ರವಾಗಿ ಅತ್ತೆ-ಮಾವನ ಮುಂದೆ ಹೈಡ್ರಾಮಾ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕಡಲೂರು ಜಿಲ್ಲೆಯ ನಿವಾಸಿ ಮಣಿಕಂಠನ್ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ. ಅದೇ ಜಿಲ್ಲೆಯ ನೈವೇಲಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷ ಸೇವಿಸಿದ್ದ ಮಣಿಕಂಠನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ
ಮಣಿಕಂಠನ್ ನೈವೇಲಿಯ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ದಂಪತಿಗೆ ಒಂದು ಮಗು ಕೂಡ ಇದೆ. ಆದರೆ ಕೌಟುಂಬಿಕ ಕಲಹದಿಂದಾಗಿ ಪತ್ನಿ ತವರು ಮನೆ ಸೇರಿದ್ದಾಳೆ. ಪತ್ನಿ ಮತ್ತೆ ಮನೆಗೆ ಬರುತ್ತಾಳೆ ಎಂದು ಕಾಯುತ್ತಿದ್ದ ಮಣಿಕಂಠನ್ ಭರವಸೆ ಹುಸಿಯಾಗಿತ್ತು. ಅಷ್ಟೇ ಅಲ್ಲದೆ ದಂಪತಿಯ ವಿಚ್ಛೇದನವು ಕೋರ್ಟ್ ಮೆಟ್ಟಿಲೇರಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು
ನನಗೆ ವಿಚ್ಛೇದನ ಬೇಡ, ಮಗು-ಪತ್ನಿಯನ್ನು ನನ್ನ ಜೊತೆಗೆ ಕಳುಹಿಸಿ ಎಂದು ಮಣಿಕಂಠನ್ ಅತ್ತೆ-ಮಾವರನ್ನು ಒತ್ತಾಯಿಸಿದ್ದ. ಆದರೆ ಅವರು ನಿರಾಕರಿಸಿದ್ದರಿಂದ ಅಸಮಾಧಾನಗೊಂಡ ಮಣಿಕಂಠನ್, ಕೈಯಲ್ಲಿ ಪೆಟ್ರೋಲ್, ಕೊರಳಲ್ಲಿ ಬಾಬ್ಗಳನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಾವನ ಮನೆಯ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದ. ಇದರಿಂದ ಗಾಬರಿಕೊಂಡ ಮಣಿಕಂಠನ್ ಅತ್ತೆ-ಮಾವ ತಡೆಯಲು ಯತ್ನಿಸಿದ್ದಾರೆ. ಆದರೆ ಮಣಿಕಂಠನ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಮತ್ತಷ್ಟು ಆತಂಕ ಸೃಷ್ಟಸಿದ್ದ. ಇದೇ ವೇಳೆ ಘಟನಾ ಸ್ಥಳದಲ್ಲಿ ಹಾದು ಹೋಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಮಣಿಕಂಠನ್ ಹೈಡ್ರಾಮಾ ಗಮನಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು, ಮಣಿಕಂಠನ್ನ ಮನವೊಲಿಸಲು ಪ್ರಯತ್ನಿಸಿದರು. ಆದರೆ ಆತ ಮಾತ್ರ ಯಾವುದಕ್ಕೂ ಕಿವಿಗೊಡಲಿಲ್ಲ. ಬಳಿಕ ಅಧಿಕಾರಿಗಳು ಮಣಿಕಂಠನ್ನ ಎರಡು ವರ್ಷದ ಮಗುವನ್ನು ಮನೆಯಿಂದ ಹೊರ ಕರೆತಂದರು. ಆಗ ಮಗುವನ್ನು ನೋಡಿದ ಮಣಿಕಂಠನ್ನ ಮನಸ್ಸು ಕರಗಿತು. ತಾನು ಹಾಕಿಕೊಂಡಿದ್ದ ಬಾಂಬ್ಗಳ ಸರವನ್ನು ತೆಗೆದ ಎಂದು ಪೊಲೀಸರು ತಿಳಿಸಿದ್ದಾರೆ.
ಹೈಡ್ರಾಮಾ ವೇಳೆ ತಾನು ವಿಷ ಕುಡಿದಿರುವುದಾಗಿ ಮಣಿಕಂಠನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಹೀಗಾಗಿ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಮಣಿಕಂಠನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
ಈ ಸಂಬಂಧ ಪೊಲೀಸರು ಮಣಿಕಂಠನ್, ಆತನ ಪತ್ನಿ ಹಾಗೂ ಕುಟುಂಬದವರನ್ನು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಮಣಿಕಂಠನ್ಗೆ ಕಚ್ಚಾ ಬಾಂಬ್ಗಳು ಎಲ್ಲಿಂದ ಲಭ್ಯವಾದವು ಎನ್ನುವ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.