ಚೆನ್ನೈ: ಅಪ್ರಾಪ್ತ ಬಾಲಕನೊಬ್ಬ ನಗರದ ಫ್ಲೈ ಓವರ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವನ್ನಾರಪೇಟೆ ನಗರದಲ್ಲಿ ನಡೆದಿದೆ.
ನಗರದ ನಮಕ್ಕಲ್ ಶಾಲೆಯ 12 ತರಗತಿಯ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದು, ಸಾವಿಗೂ ಮುನ್ನ ಆತ ತನ್ನ ಸಾವಿಗೆ ಕಾರಣ ತಿಳಿಸಿ ಪತ್ರ ಬರೆದಿಟ್ಟು ಸಾವನ್ನಪ್ಪಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕ ಪತ್ರದಲ್ಲಿ ತನ್ನ ತಂದೆ ಮದ್ಯವ್ಯಸನಿಯಾಗಿದ್ದು ದಯಮಾಡಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ ಎಂದು ಪ್ರಧಾನಿ ಮೋದಿ ಹಾಗೂ ತಮಿಳುನಾಡು ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದಾನೆ. ಅಲ್ಲದೇ ತನ್ನ ಅಂತಿಮ ವಿಧಿ ವಿಧಾನಗಳಿಂದ ತಂದೆಯನ್ನು ದೂರವಿಡುವಂತೆ ತಿಳಿಸಿದ್ದಾನೆ.
2015ರ ತಮಿಳುನಾಡಿನ ವಿಧಾನಸಭಾ ಚುನಾವಣೆ ವೇಳೆ ಜಯಲಲಿತಾ ಅವರು ಮದ್ಯ ಮಾರಾಟ ನಿಷೇಧ ಮಾಡುವ ಕುರಿತು ಆಶ್ವಾಸನೆ ನೀಡಿದ್ದರು. ಆದರೆ ಅಧಿಕಾರ ವಹಿಸಿಕೊಂಡ ಬಳಿಕ ಈ ವಿಷಯ ನೆನೆಗುದಿಗೆ ಬಿದ್ದಿತ್ತು. ಈ ಹಿಂದೆ 1971 ರಲ್ಲಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರ ವಹಿಸಿದ್ದ ವೇಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಬಳಿಕ ಈ ನೀತಿಯನ್ನು ಮತ್ತೆ ಹಿಂಪಡೆಯಲಾಗಿತ್ತು.
ತಮಿಳುನಾಡು ಸರ್ಕಾರ ಪ್ರತಿ ವರ್ಷ 27 ಸಾವಿರ ಕೋಟಿ ರೂ. ಆದಾಯವನ್ನು ಮದ್ಯ ಮಾರಾಟದಿಂದ ಪಡೆಯುತ್ತಿದೆ. ಜಯಲಲಿತಾ ಅವರ ಸಾವಿನ ಬಳಿಕ ಅಧಿಕಾರ ವಹಿಸಿಕೊಂಡ ಇ ಪನ್ನೀರ್ ಸೇಲ್ವಂ 500 ಅನಧಿಕೃತ ಮದ್ಯ ಮಳಿಗೆಗಳನ್ನು ಮುಚ್ಚಿಸಿದ್ದಾರೆ.