ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಅಕ್ಷರಶಃ ರಣರಂಗವಾಗಿತ್ತು. ಕೆಂಪು ಕೋಟೆಯಲ್ಲೂ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಇದು ರಾಷ್ಟ್ರದ್ರೋಹ ಎಂದು ಕಾಂಗ್ರೆಸ್ ಮಾಡಿದ ನಿಲುವಳಿ ಮಂಡನೆ ಪ್ರಸ್ತಾಪದ ವೇಳೆ ಈಶ್ವರಪ್ಪ ವರ್ಸಸ್ ಡಿ.ಕೆ.ಶಿಕುಮಾರ್ ನಡುವೆ ಏಕವಚನದಲ್ಲಿ ವೈಯುಕ್ತಿಕ ವಾಕ್ಸಮರವೂ ನಡೆಯಿತು.
ಸಿದ್ದರಾಮಯ್ಯ ಮಾತಾನಾಡುವಾಗ ಅವರ ಬಳಿ ಹೋದ ಡಿಕೆಶಿ ಈಶ್ವರಪ್ಪಗೆ ಮಾತನಾಡಲು ಬಿಡಬೇಡಿ ಎಂದು ಹೇಳಿದ್ರು. ಆಗ ಸಿಟ್ಟಿಗೆದ್ದ ಈಶ್ವರಪ್ಪ ಸದನ ನಿಮ್ಮ ಅಪ್ಪನದ್ದಾ ಎಂದು ಪ್ರಶ್ನಿಸಿದ್ರು. ಆಗ ಸದನದಲ್ಲಿ ಗದ್ದಲ ಹೆಚ್ಚಾದಾಗ ಕಲಾಪವನ್ನು ಮುಂದೂಡಿದ್ದರೂ ಈಶ್ವರಪ್ಪ-ಡಿಕೆಶಿ ನಡುವೆ ಒಂದು ಹಂತಕ್ಕೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಬಳಿಕ ಯಡಿಯೂರಪ್ಪ ಮಧ್ಯಪ್ರವೇಶದ ಬಳಿಕ ವಾತಾವರಣ ತಿಳಿಯಾಯ್ತು. ಇದನ್ನೂ ಓದಿ: ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ
ಶೇಮ್ ಶೇಮ್ ಈಶ್ವರಪ್ಪ ಘೋಷಣೆ!: ಇವತ್ತು ಈಶ್ವರಪ್ಪ ಹೇಳಿಕೆ ವಿರುದ್ಧ ನಿಲುವಳಿ ಸೂಚನೆ ಮಂಡನೆಯ ಪ್ರಾಥಮಿಕ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ರು. ಈಶ್ವರಪ್ಪ 2006ರಿಂದಲೂ ಸಚಿವರಾಗಿದ್ದರು, ಅವರು ಜವಾಬ್ದಾರಿಯಿಂದ ಹೇಳಿಕೆ ಕೊಡ್ತಾರೆ ಅಂದ್ಕೊಂಡಿದ್ದೆ. ರಾಷ್ಟ್ರಧ್ವಜದ ಬಗ್ಗೆ ಬಹಳ ಅಗೌರವವಾಗಿ ಹೇಳಿಕೆ ಕೊಟ್ಟಿದ್ದಾರೆ. ಸಂವಿಧಾನದ ಆರ್ಟಿಕಲ್ 51(1) ಪ್ರಕಾರ ಪ್ರತಿಯೊಬ್ಬರು ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು. ಆದ್ರೆ ಕೆಂಪು ಕೋಟೆಯಲ್ಲೂ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ಐಪಿಸಿ ಪ್ರಕಾರ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ರೆ, ಸಂವಿಧಾನಕ್ಕೆ ಅಗೌರವ ಮಾಡಿದ್ರೆ, ರಾಷ್ಟ್ರಗೀತೆಗೆ ಅಗೌರವ ಮಾಡಿದ್ರೆ ಅದು ದೇಶ ದ್ರೋಹ. 3 ರಿಂದ 5 ವರ್ಷ ಜೈಲು ಶಿಕ್ಷೆ ಇದೆ. ಆದ್ರೆ ಈಶ್ವರಪ್ಪ ವಿರುದ್ಧ ಸರ್ಕಾರ ಏನೂ ಕ್ರಮ ತೆಗೆದುಕೊಂಡಿಲ್ಲ. ನನ್ನ ಪ್ರಕಾರ ಈಶ್ವರಪ್ಪ ಅವರನ್ನು ಮಂತ್ರಿಮಂಡಲದಿಂದ ಸಿಎಂ ಅಮಾನತು ಮಾಡಬೇಕಿತ್ತು. ಮಂತ್ರಿಯಾಗಿರಲು ಈಶ್ವರಪ್ಪ ಅರ್ಹರಲ್ಲ. ಮುಖ್ಯಮಂತ್ರಿಗಳೇ ಸ್ವಯಂಪ್ರೇರಿತರಾಗಿ ಅವರನ್ನ ಅಮಾನತು ಮಾಡಿ, ಮೊಕದ್ದಮೆ ದಾಖಲು ಮಾಡಿ ಎಂದು ಆಗ್ರಹಿಸಿದ್ರು. ಆಗ ಕಾಂಗ್ರೆಸ್ ಶಾಸಕರು ಶೇಮ್ ಶೇಮ್ ಈಶ್ವರಪ್ಪ ಎಂದು ಛೇಡಿಸಿದ್ರು.
ನೀನು ಜೈಲಿಗೆ ಹೋಗಿ ಬಂದವನು!: ಆದ್ರೆ ಸಿದ್ದರಾಮಯ್ಯ ನಿಲುವಳಿ ಮಂಡನೆ ಪ್ರಸ್ತಾಪಕ್ಕೆ ಕಾನೂನು ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ರು. ಭಗವದ್ ಧ್ವಜ ಹಾರಿಸಬಹುದು ಅಂತಾ ಹೇಳಿದ್ದಾರೆ, ನಾನೇ ಹಾರಿಸುತ್ತೇನೆ ಅಂತಾ ಹೇಳಿಲ್ಲ. ಕೆಂಪು ಕೋಟೆ ಮೇಲೆ ಧ್ವಜ ಹಾರಿಸುತ್ತೇನೆ ಅಂದಿಲ್ಲ. ಈಶ್ವರಪ್ಪ ಎಲ್ಲಿ ಅಪಮಾನ ಮಾಡಿದ್ದಾರೆ..? ಬಂದೂಕು ಕೈಯಲ್ಲಿ ಕೊಟ್ಟು ಬಾವುಟ ಹಾರಿಸಬೇಡಿ ಅಂದಾಗ ಬಾವುಟ ಹಾರಿಸಿದ ಪಕ್ಷ ಬಿಜೆಪಿ. ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ಬಾವುಟ ಹಾರಿಸಿದ ಪಕ್ಷ ಬಿಜೆಪಿ. ಈಶ್ವರಪ್ಪ ಹೇಗೆ ದೇಶ ದ್ರೋಹಿ ಆಗ್ತಾರೆ..? ಇದು ನಿಲುವಳಿ ಸೂಚನೆ ವ್ಯಾಪ್ತಿಗೆ ಬರಲ್ಲ, ತಿರಸ್ಕಾರ ಮಾಡಿ ಎಂದು ಮಾಧುಸ್ವಾಮಿ ಮನವಿ ಮಾಡಿದ್ರು. ಆಗ ಈಶ್ವರಪ್ಪ ದೇಶದ್ರೋಹಿ ಅಂತಾ ಡಿಕೆಶಿ ಕೂಗಿದ್ದೇ ತಡ ಎದ್ದು ನಿಂತ ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ರು. ನಾನಲ್ಲ ರಾಷ್ಟ್ರದ್ರೋಹಿ. ನೀನು. ನೀನು ಜೈಲಿಗೆ ಹೋಗಿ ಬಂದವನು, ಬೇಲ್ನಲ್ಲಿ ಇದ್ದೀಯಾ, ನೀನು ರಾಷ್ಟ್ರ ದ್ರೋಹಿ. ನೀನು ನನಗೆ ಹೇಳಬೇಡ ಅಂತಾ ಡಿ.ಕೆ.ಶಿ ವಿರುದ್ಧ ಏಕವಚನದಲ್ಲಿ ವಾಕ್ಸಮರ ನಡೆಸಿದ್ರು.
BSY ಸಮಾಧಾನ: ಆ ವೇಳೆ ಈಶ್ವರಪ್ಪ ಮಾತನಾಡುವ ಮೊದಲು ಚರ್ಚೆಗೆ ಅವಕಾಶ ಕೊಡಿ ಅಂತಾ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಆ ವೇಳೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬಳಿಗೆ ಹೋಗಿ ಈಶ್ವರಪ್ಪಗೆ ಅವಕಾಶ ಕೊಡಬೇಡಿ ಅಂದ್ರು. ತಕ್ಷಣವೇ ಸಿಟ್ಟಿಗೆದ್ದ ಈಶ್ವರಪ್ಪ ನಿಮ್ಮಪ್ಪನದಾ ಸದನ ಅಂತಾ ಡಿಕೆಶಿ ವಿರುದ್ಧ ಗರಂ ಆದ್ರು. ಹಾಗೆ ಹೇಳಿದ್ದೇ ತಡ ಡಿಕೆಶಿ ಸದನದ ಬಾವಿಗಿಳಿದು ಈಶ್ವರಪ್ಪ ಬಳಿ ಹೋಗಿ ಮಾತಿನ ಚಕಮಕಿ ನಡೆಸಿದ್ರು. ಆಗ ಸ್ಪೀಕರ್ ಕಲಾಪವನ್ನ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ರು. ಆದರೂ ಸದನದ ಬಾವಿಯಿಂದಲೇ ಈಶ್ವರಪ್ಪ ಜೊತೆ ಡಿಕೆಶಿ, ಕಾಂಗ್ರೆಸ್ ಶಾಸಕರು ವಾಗ್ವಾದಕ್ಕಿಳಿದಿದ್ದರು. ಕಡೆಗೆ ಯಡಿಯೂರಪ್ಪ ಬಂದು ಎರಡು ಕಡೆಯ ಶಾಸಕರನ್ನು ಸಮಾಧಾನಪಡಿಸಿದ್ರು.