ಕಾಂತಾರ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೆಸರು ರಾಜಕಾರಣದ ಪಡಸಾಲೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಿಷಬ್ ಸ್ಪರ್ಧಿಸಲಿದ್ದಾರೆ ಎನ್ನುವ ಮಾತೂ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿತ್ತು. ಎರಡು ಪ್ರಮುಖ ರಾಜಕೀಯ ಪಕ್ಷಗಳು ಅವರೊಂದಿಗೆ ಚರ್ಚೆ ಮಾಡಿವೆ ಎಂದೂ ಹೇಳಲಾಗಿತ್ತು. ಈ ಎಲ್ಲ ಪ್ರಶ್ನೆಗಳಿಗೂ ಸ್ವತಃ ರಿಷಬ್ ಶೆಟ್ಟಿ ಅವರೇ ಉತ್ತರಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜನೆ ಮಾಡಿದ್ದ ‘ಮುಖಾಮುಖಿ’ ಕಾರ್ಯಕ್ರಮದಲ್ಲಿ ‘ಪಬ್ಲಿಕ್ ಟಿವಿ ಡಿಜಿಟಲ್’ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಷಬ್, ‘ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಸಮಾಜಸೇವೆಗೆ ರಾಜಕಾರಣವೇ ಆಗಬೇಕಿಲ್ಲ’ ಎಂದು ಉತ್ತರಿಸಿದ್ದಾರೆ. ಈ ಮೂಲಕ ರಾಜಕಾರಣದ ಒಲವಿನ ಬಗ್ಗೆ ರಿಷಬ್ ಅಲ್ಲಗಳೆದಿದ್ದಾರೆ. ರಾಜಕಾರಣಕ್ಕೆ ಸಂಬಂಧಿಸಿದ ವಿಷಯಗಳು ತಮಗೂ ತಲುಪಿರುವ ಕುರಿತೂ ಅವರು ಮಾತನಾಡಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನೀವು ಎಲ್ಲಿರುತ್ತೀರಿ? ಎಂದು ಕೇಳಲಾದ ಪ್ರಶ್ನೆಗೂ ಅವರು ಉತ್ತರಿಸಿದ್ದು, ‘ಕಾಂತಾರ ಸಿನಿಮಾದ ಕೆಲಸದಲ್ಲಿ ಇರುವೆ. ಮತದಾನ ನಮ್ಮೆಲ್ಲರ ಹಕ್ಕು. ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವೆ’ ಎಂದರು ರಿಷಬ್. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಇದೆಲ್ಲ ಕಪೋಕಲ್ಪಿತ ಮಾತು ಎಂದು ಅವರು ಹೇಳಿದರು. ಈ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮುರಳೀಧರ್ ಖಜಾನ್ ನಡೆಸಿಕೊಟ್ಟರೆ, ಕರ್ನಾಟಕ ಚಲನಚಿತ್ರ ಪರ್ತಕರ್ತರ ಸಂಘದ ಅಧ್ಯಕ್ಷ ಬಾ.ನಾ.ಸುಬ್ರಮಣ್ಯ ವೇದಿಕೆ ಮೇಲಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k