Tag: ST Somashekar

  • ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    – ಅನರ್ಹರಿಗೆ ಮಂತ್ರಿಗಿರಿ ಕೊಡಲ್ಲಾಂದ್ರೆ ಮೊದಲೇ ಹೇಳ್ಬೇಕಿತ್ತು
    – ಬಿಜೆಪಿ ಸರ್ಕಾರ ಆಗೋದು ಬೇಡ ಅನ್ಬೇಕಿತ್ತು
    – ಕಾಂಗ್ರೆಸ್‍ನಲ್ಲಿ ಇದ್ದೀದ್ರೆ ಸಮಾಧಿ ಆಗುತ್ತಿದ್ವಿ

    ಬೆಂಗಳೂರು: ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅರ್ನಹ ಶಾಸಕರಿಗೆ ಸಚಿವಸ್ಥಾನ ನೀಡಿದರೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಬಿಜೆಪಿಯವರು ಮೊದಲೇ ಹೇಳಬೇಕಿತ್ತು. ಬಿಜೆಪಿ ಸರ್ಕಾರ ರಚನೆ ಆಗುವುದು ಬೇಡ ಅಂತ ಹೇಳಬೇಕಿತ್ತು. ಸಚಿವಸ್ಥಾನ ನೀಡಿದರೆ ಅಸಮಾಧಾನ ಉಂಟಾಗುತ್ತದೆ ಅಂತ ಹೇಳುವುದಾದರೆ ನಮ್ಮನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು ಎಂದು ಗುಡುಗಿದರು. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    bjp mlas 3

    ಶಿವಾಜಿ ನಗರ ಉಪ ಚುನಾವಣೆ ಸ್ಪರ್ಧೆಗೆ ರೋಷನ್ ಬೇಗ್ ಮುಂದಾಗಲಿಲ್ಲ. ರಾಣೇಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ, ಮಂತ್ರಿ ಮಾಡುತ್ತಾರೆ ಎಂಬ ಮಾಹಿತಿ ಇದೆ. ಅನರ್ಹರಿಗೆ ಸಚಿವ ಸ್ಥಾನ ತಪ್ಪುವುದಿಲ್ಲ ಎಂದರು.

    ನಾವು ಕಾಂಗ್ರೆಸ್‍ನಲ್ಲಿ ಇದ್ದಿದ್ದರೆ ಸಮಾಧಿ ಆಗುತ್ತಿದ್ದೇವು. ಈಗ ಸಮಾಧಿಯಿಂದ ಹೊರಗೆ ಬಂದಿದ್ದೇವೆ. ಟೀಕೆ ಮಾಡುವವರು ಮಾಡಲಿ. ನಾವು ಮಾತ್ರ ಚೆನ್ನಾಗಿದ್ದೇವೆ. ನಮ್ಮ ವಿರುದ್ಧ ಕಾಂಗ್ರೆಸ್‍ನವರಿಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಆರೋಪ ಮಾಡಿದರೆ ಏನು ಪ್ರಯೋಜನ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ST Somashekar A

    ಈ ಹಿಂದೆ ನಾನೊಬ್ಬನೇ ಚುನಾವಣೆ ಎದುರಿಸಿದ್ದೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯವರನ್ನು ಒಗ್ಗೂಡಿಸಲಾಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಯಕರು ಪ್ರಚಾರಕ್ಕೆ ಬಂದಿದ್ದರು. 641 ಬೂತ್‍ಗಳಲ್ಲಿ ಎಲ್ಲ ರೀತಿಯ ಅಧ್ಯಯನ ಮಾಡಿದ್ದೇನೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.

    ಉಪ ಚುನಾವಣೆ ಫಲಿತಾಂಶದ ಬಳಿಕ ಕ್ಷೇತ್ರದ ವಿವಿಧೆಡೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರು ಯಾರೂ ಸೋಮವಾರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದು ತಿಳಿಸಿದರು.

    r ashok

    ಒಕ್ಕಲಿಗ ನಾಯಕನಾಗಲು ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದ್ದಾಗಲೂ ನಾನು ಪೈಪೋಟಿ ಮಾಡಿಲ್ಲ. ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಈಗ ಸಚಿವ ಆರ್.ಅಶೋಕ್ ಅವರಿಗೆ ಪೈಪೋಟಿ ನೀಡಿ ಒಕ್ಕಲಿಗ ನಾಯಕನಾಗುವ ಆಸೆ ನನ್ನಗಿಲ್ಲ. ಬಿಜೆಪಿಗೆ ಬಂದಿದ್ದೇನೆ. ಇಲ್ಲಿ ಇರುವಷ್ಟು ದಿನ ಪ್ರಾಮಾಣಿಕನಾಗಿ ಇರುತ್ತೇನೆ. ಇಲ್ಲಿಂದ ಬೇರೆ ಕಡೆ ಹೋಗುವ ಯೋಚನೆ ಮಾಡಿಲ್ಲ. ಮಂತ್ರಿ ಮಾಡಿ ಎಂದು ಎಂದಿಗೂ ಕೇಳುವುದಿಲ್ಲ. ಇಂತಹ ಖಾತೆ ಬೇಕು ಅಂತ ಕಂಡಿಷನ್ ಹಾಕಿಲ್ಲ. ಮಂತ್ರಿ ಸ್ಥಾನವನ್ನು ಅವರೇ ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್- ಜೆಡಿಎಸ್ ಒಪ್ಪಂದದ ಆಡಿಯೋ ಈಗಲೂ ನನ್ನ ಬಳಿಯಿದೆ. ಸೂಕ್ತ ಸಮಯ ಬಂದಾಗ ಆಡಿಯೋ ಬಿಡುತ್ತೇಮೆ. ಆ ಲೀಡರ್ ಯಾರು ಅಂತ ಹೇಳುತ್ತೇನೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ಮಾಡುವ ಅವಶ್ಯಕತೆ ಬೀಳಲ್ಲ. 9 ಜನ ಜೆಡಿಎಸ್ ಶಾಸಕರು, 4 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತೇವೆ ಅಂದಿದ್ದಾರೆ. ಆದರೆ ನಾವು ನಮ್ಮ ಕಷ್ಟ ಹೇಳಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದರು.

    Congress BJP JDS

    ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರು ಆರೋಗ್ಯ ಎಲ್ಲವನ್ನೂ ಕೊಟ್ಟು ಒಳ್ಳೆಯದು ಮಾಡಲಿ. ನಾವು ಮೂರ್ನಾಲ್ಕು ತಿಂಗಳು ನೋವು ಅನುಭವಿಸಿದ್ದೇವೆ. ಈ ಎಲ್ಲ ನೋವನ್ನು ರಾಜೀನಾಮೆ ಕೊಡಲು ಮುಂದಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ತಿಳಿಸಿದ್ದೇವೆ ಎಂದರು.

  • ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ರು- ಪರಮೇಶ್ವರ್ ಪರ ಅನರ್ಹ ಶಾಸಕ ಸೋಮಶೇಖರ್ ಬ್ಯಾಟಿಂಗ್

    ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ರು- ಪರಮೇಶ್ವರ್ ಪರ ಅನರ್ಹ ಶಾಸಕ ಸೋಮಶೇಖರ್ ಬ್ಯಾಟಿಂಗ್

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ತಪ್ಪಿಸಲು ಯತ್ನಿಸಿದ್ದರು ಎಂದು ಅನರ್ಹ ಶಾಸಕ ಸೋಮಶೇಖರ್ ಅವರು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಕಟ್ಟಲು ಆಗಲ್ಲ. ಯಾರಾದರೂ ಪರಮೇಶ್ವರ್ ಅವರನ್ನು ಬಿಟ್ಟು ಪಕ್ಷ ಕಟ್ಟುತ್ತೇವೆ ಎಂದರೆ ಅದು ಸುಳ್ಳು. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಸುಮ್ಮನೆ ಕೆಲವರು ಅವರನ್ನು ಹಾವು, ಮುಂಗುಸಿ ಎಂದು ಬಿಂಬಿಸುತ್ತಿದ್ದಾರೆ. ಡಿಸಿಎಂ ಸ್ಥಾನ ತಪ್ಪಿಸಲು ಕೂಡ ಪ್ರಯತ್ನ ನಡೆಸಿದ್ದರು. ಅದು ಸಾಧ್ಯವಾಗಲಿಲ್ಲ, ಈ ಕುರಿತು ಸೂಕ್ತ ಸಂದರ್ಭದಲ್ಲಿ ಬಹಿರಂಗ ಪಡಿಸುತ್ತೇವೆ ಎಂದರು.

    Dr. Prameshwara 1

    ಇದೇ ವೇಳೆ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಚ್‍ಡಿ ದೇವೇಗೌಡ, ಸಿದ್ದರಾಮಯ್ಯ ಅವರು ಏನೇ ಹೇಳಲಿ. ಚುನಾವಣೆಯ ಕುರಿತು ಅಧಿಕೃತವಾಗಿ ಹೇಳುವುದು ಆಯೋಗ ಮಾತ್ರ. ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸ ಇಲ್ಲ. ಬೆಳಗ್ಗೆ ಎದ್ದ ಕ್ಷಣವೇ ನಮ್ಮದೇ ಚಿಂತೆ ಎಂದು ಕಿಡಿಕಾರಿದರು.

    ಅಭಿವೃದ್ಧಿಗಾಗಿ ಭಿಕ್ಷೆ: ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ ಕೇಳುತ್ತಿದ್ದೇವೆ. ಹುಲಿ ಎಲ್ಲೇ ಇದ್ದರು ಹುಲಿಯೇ. ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ, ನಮ್ಮ ಪ್ರಕರಣ ಸದ್ಯದಲ್ಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತೆ. ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    siddaramaiah

    ನಾವು ಕಾಂಗ್ರೆಸ್ ನಾಯಕರಿಗೆ ಸಚಿವರಾಗುತ್ತೇವೆ ಎಂದು ಹೇಳಿಲ್ಲ. ಅಲ್ಲದೇ ನಾವು ಯಾರು ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದು ಹೇಳಿಲ್ಲ. ನ್ಯಾಯಾಲಯದ ವಿಚಾರಣೆ ನಡೆದ ಬಳಿಕ ಏನಾಗುತ್ತದೆ ತೀರ್ಮಾನ ಮಾಡುತ್ತೇವೆ. ಚುನಾವಣೆ ಬಗ್ಗೆ ಈಗಾಗಲೇ ಆಯೋಗಕ್ಕೂ ಪತ್ರ ಬರೆದಿದ್ದೇವೆ. ಆದರೆ ಕಾಂಗ್ರೆಸ್ ನಾಯಕರಿಗೆ ಹೇಳಲು ಬೇರೆ ಏನು ಇಲ್ಲದ ಕಾರಣ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ ಅಷ್ಟೇ. ಅವರಿಗೆ ಅನರ್ಹ ಶಾಸಕರ ಕ್ಷೇತ್ರದಲ್ಲಿ ಚುನಾವಣೆಯದ್ದೆ ಬಹುದೊಡ್ಡ ಚಿಂತೆಯಾಗಿದೆ ಎಂದರು. ಅಲ್ಲದೇ ನಾವು ಕಾಂಗ್ರೆಸ್ ಪಕ್ಷವನ್ನ ಕ್ಷೇತ್ರದಲ್ಲಿ ಕಟ್ಟಿ ಬೆಳೆಸಿದ್ದೇವೆ, ನಮ್ಮನ್ನು ಉಚ್ಛಾಟನೆ ಮಾಡಲು ಆಗಲ್ಲ. ಇನ್ನೂ ಮೂರು ವರ್ಷ ಶಾಸಕರಾಗಿ ಇರಬೇಕು ಎಂದೇ ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂದು ತಿಳಿಸಿದರು.

  • ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್

    ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್

    ಬೆಂಗಳೂರು: ಕೆಲವರು ಮಗನಿಗೆ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ಕೊಡುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಜಾತಿ, ಸಮುದಾಯದವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು, ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದ ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪದ ಜಟ್ಟಿಗರಹಳ್ಳಿಯಲ್ಲಿ ನಡೆದ ನೂತನ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇನ್ನೂ 5 ವರ್ಷ ಅಧಿಕಾರದಲ್ಲಿ ಇದ್ದಿದ್ದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಆಗುತಿತ್ತು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

    ST Somashekar 1

    ಸಿದ್ದರಾಮಯ್ಯ ಅವರು ನನ್ನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷನನ್ನಾಗಿ ಮಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಒಂದು ಮಾತು ಹೇಳಿದರೂ ಹೆಚ್ಚು ಕಡಿಮೆ ಆಗುತ್ತದೆ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಲಮಾಡಿ ಸ್ಪರ್ಧಿಸಿದರು. ಆದರೆ ಅವರ ವಿರುದ್ಧವೇ ಒಳಸಂಚು ರೂಪಿಸಿ ಪ್ರತಿಸ್ಪರ್ಧಿ ಅಭ್ಯರ್ಥಿ ಹಾಕಿದರು ಎಂದು ಹೆಸರು ಹೇಳದೇ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನಮಗೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ನಮ್ಮ ಕಷ್ಟಗಳು ಏನೇ ಇದ್ದರೂ ನಾವು ಅವರ ಬಳಿಯೇ ಹೇಳಿಕೊಳ್ಳುತ್ತೇವೆ. ನಾನು ಮೂರು ಬಾರಿ ಶಾಸಕನಾಗಲು ಸಿದ್ದರಾಮಯ್ಯ ಅವರೇ ಕಾರಣ. ಅವರು ನಿಜವಾದ ಮಣ್ಣಿನ ಮಗ. ಯಾರು ಏನೇ ಹೇಳಿದರೂ ಶಾಸಕ ಸುಧಾಕರ್ ಹೇಳಿದ್ದಂತೆ ನಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದರು.

    Siddaramaiah

    ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದವರಿಗೆ ದೇವರಾಜು ಅರಸ್ ಬಳಿಕ ಸಿದ್ದರಾಮಯ್ಯ ಅವರು ಸಿಕ್ಕಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ಧ್ವನಿಯಾದರು. ಸಿದ್ದರಾಮಯ್ಯ ಹಸು ಇದ್ದಂತೆ. ಹಸು ತನ್ನ ಹಾಲು ತಾನೇ ಕುಡಿಯಲ್ಲ. ಹಾಗೇ ಸಿದ್ದರಾಮಯ್ಯ ಯಾವಾಗಲೂ ಪರೋಪಕಾರಿ. ಅವರು ಮತ್ತೆ ಸಿಎಂ ಆಗಬೇಕು ಎಂದರು.

    ನಾಡಿನ ಜನರಿಗೆ ಸಿದ್ದರಾಮಯ್ಯ ಕೊಟ್ಟ ಯೋಜನೆ ಪೂರ್ಣವಾಗಬೇಕು. ಅವರು ಘೋಷಿಸಿದ ಅನುದಾನ ಈವರೆಗೂ ಬಿಡುಗಡೆ ಆಗಿಲ್ಲ. ಸಿಎಂ ಕುಮಾರಸ್ವಾಮಿ ಅವರು ನಿರ್ದೇಶನ ನೀಡುವ ಮೂಲಕ ಅನುದಾನ ಬಿಡುಗಡೆಗೆ ಶ್ರಮಿಸಲಿ ಎಂದು ಈಶ್ವರಾನಂದಪುರಿ ಸ್ವಾಮೀಜಿ ಮನವಿ ಸಲ್ಲಿಸಿದರು.

    puttarangashetty

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv