Tag: ರೈಟಾಫ್

  • ಯುಪಿಎ ಅವಧಿಯಲ್ಲಿ 1,45,226 ಕೋಟಿ ರೂ. ‘ಸಾಲ ಮನ್ನಾ’ – ರಾಹುಲ್‍ಗೆ ಸೀತಾರಾಮನ್ ತಿರುಗೇಟು

    ಯುಪಿಎ ಅವಧಿಯಲ್ಲಿ 1,45,226 ಕೋಟಿ ರೂ. ‘ಸಾಲ ಮನ್ನಾ’ – ರಾಹುಲ್‍ಗೆ ಸೀತಾರಾಮನ್ ತಿರುಗೇಟು

    – ಮನಮೋಹನ್ ಸಿಂಗ್ ಬಳಿ ರಾಹುಲ್ ರೈಟಾಫ್ ಬಗ್ಗೆ ತಿಳಿದುಕೊಳ್ಳಲಿ
    – ಸರಣಿ ಟ್ವೀಟ್ ಮಾಡಿ ಆರೋಪಕ್ಕೆ ಸಚಿವೆಯಿಂದ ತಿರುಗೇಟು

    ನವದೆಹಲಿ: ಜನರನ್ನು ದಿಕ್ಕುತ್ತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

    ಆರ್‌ಬಿಐ ರೈಟಾಫ್ ಮಾಡಿದ ವ್ಯಕ್ತಿಗಳ ವಿವರವನ್ನು ಬಹಿರಂಗ ಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು “ಆಡಳಿತ ಪಕ್ಷದ ಸ್ನೇಹಿತ”ರಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಮಾಹಿತಿಯನ್ನು ಸಂಸತ್ತಿನಲ್ಲಿ ಬಹಿರಂಗ ಪಡಿಸಲಿಲ್ಲ ಎಂದು ಆರೋಪಿಸಿದ್ದರು.

    “ನಾನು ಸಂಸತ್ತಿನಲ್ಲಿ ಸರಳ ಪ್ರಶ್ನೆ ಕೇಳಿದ್ದೆ. ಬ್ಯಾಂಕುಗಳಿಗೆ ಹಗರಣ ಮಾಡಿದ್ದ 50 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೆ. ಆದರೆ ಹಣಕಾಸು ಸಚಿವರು ಈ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಈಗ ಆರ್‌ಬಿಐ ನೀರವ್ ಮೋದಿ, ಮೆಹುಲ್ ಚೋಕ್ಸಿ, ಮತ್ತು ಬಿಜೆಪಿ ಸ್ನೇಹಿತರು ಈ ಪಟ್ಟಿಯಲ್ಲಿದ್ದಾರೆ. ಈ ಕಾರಣಕ್ಕೆ ಅವರು ಸಂಸತ್ತಿನಲ್ಲಿ ಸತ್ಯವನ್ನು ಮರೆಮಾಚಿದ್ದರು” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಕುಟುಕಿದ್ದರು.

    50 ಮಂದಿ ಉದ್ಯಮಿಗಳ ಸಾಲವನ್ನು ರೈಟಾಫ್ ಮಾಡಿದ ವಿಚಾರಕ್ಕೆ ಕಾಂಗ್ರೆಸ್ ನಾಯಕರಿಂದ ಟೀಕೆ ವ್ಯಕ್ತವಾಗುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಸರಣಿ ಟ್ವೀಟ್ ಮಾಡಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಜನರನ್ನು ದಿಕ್ಕುತ್ತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ. ತಮಗೆ ತೋಚಿದ ವಿಚಾರವನ್ನು ಬೇಕಾದಂತೆ ಹೇಳುತ್ತಾರೆ. ಆರ್ಥಿಕ ವ್ಯವಸ್ಥೆಯನ್ನು ಸರಿ ಮಾಡಲು ಕಾಂಗ್ರೆಸ್ ವಿಫಲವಾಗಿದ್ದು ಯಾಕೆ ಎನ್ನುವುದನ್ನು ರಾಹುಲ್ ಗಾಂಧಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಳಿತದಲ್ಲಿದ್ದಾಗಲೂ ಅಥವಾ ವಿರೋಧ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಭ್ರಷ್ಟಾಚಾರ ನಿಲ್ಲಿಸಲು ಯಾವುದೇ ಬದ್ಧತೆ ತೋರಿಸಲಿಲ್ಲ.

    ನರೇಂದ್ರ ಮೋದಿ ಸರ್ಕಾರ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಂಡಿದೆ. ಈಗಾಗಲೇ 3,515 ಎಫ್‍ಐಆರ್ ದಾಖಲಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಪ್ರಕರಣಗಳ ಪೈಕಿ ಒಟ್ಟು 18,332 ಕೋಟಿ ಮೌಲ್ಯ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’. ಯಾರ ಸಾಲ ಎಷ್ಟು ರೈಟಾಫ್ ಆಗಿದೆ?

    2009-2010 ಮತ್ತು 2013-2014ರ ನಡುವೆ ವಾಣಿಜ್ಯ ಬ್ಯಾಂಕುಗಳು 1,45,226 ಕೋಟಿ ರೂ. ರೈಟಾಫ್ ಮಾಡಿವೆ. ಎನ್‍ಡಿಎ ಸರ್ಕಾರವನ್ನು ಟೀಕೆ ಮಾಡುವ ಮೊದಲು ರಾಹುಲ್ ಗಾಂಧಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಳಿ ರೈಟಾಫ್ ಎಂದರೇನು ಎಂದು ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

    “2006ರಿಂದ 2008ರ ಮಧ್ಯೆ ದೊಡ್ಡ ಪ್ರಮಾಣದ ಅನುತ್ಪಾದಕ ಸಾಲಗಳು ಸೃಷ್ಟಿಯಾಗಿತ್ತು. ಸಾಲ ಹಿಂತಿರುಗಿಸದೆ ವಂಚಿಸದೆ ಹಿನ್ನಲೆಯಿರುವ ಪ್ರಮುಖ ಉದ್ಯಮಿಗಳೇ ಈ ಸಾಲಗಳನ್ನು ಹೊಂದಿದ್ದರು” ಎಂಬ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆಯನ್ನು ತಮ್ಮ ವಾದಕ್ಕೆ ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ವಿಜಯ್ ಮಲ್ಯ ಪ್ರಕರಣದಲ್ಲಿ 1,693 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿದ್ದು ಸರ್ಕಾರ ಇಂಗ್ಲೆಂಡ್ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ. ಹೈಕೋರ್ಟ್ ಸಹ ಹಸ್ತಾಂತರ ಪರವಾಗಿಯೇ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.

    ನೀರವ್ ಮೋದಿ ಪ್ರಕರಣದಲ್ಲಿ 2,387 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ 53.45 ಕೋಟಿ ರೂ. ಮೌಲ್ಯದ ಲಕ್ಷುರಿ ವಸ್ತುಗಳನ್ನು ಹರಾಜು ಹಾಕಲಾಗಿದೆ. ಈಗಾಗಲೇ ಈ ವ್ಯಕ್ತಿ ಇಂಗ್ಲೆಂಡ್ ಜೈಲಿನಲ್ಲಿದ್ದಾರೆ. ಮೆಹುಲ್ ಚೋಕ್ಸಿ ಪ್ರಕರಣಲ್ಲಿ 1,936.95 ಕೋಟಿ ರೂ. ಮೌಲ್ಯ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ರೆಡ್ ನೋಟಿಸ್ ಹೊರಡಿಸಲಾಗಿದ್ದು. ಆಂಟಿಗುವಾ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಾಲ ಮರಳಿಸುವ ಶಕ್ತಿ ಇದ್ದರೂ ಹಿಂತಿರುಗಿಸದಿದ್ದವರನ್ನು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರು ಎಂದು ಹೆಸರಿಸಲಾಯಿತು. ಇಂತವರು ಹಿಂದಿನ ಯುಪಿಎ ಸರ್ಕಾರದ  ‘ಫೋನ್ ಬ್ಯಾಂಕಿಂಗ್’ ಸೌಲಭ್ಯವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದರು ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

     

  • ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’

    ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’

    – ರೈಟಾಫ್ ಮಾಹಿತಿ ನೀಡಿದ ಆರ್‌ಬಿಐ
    – ಆರ್‌ಟಿಐ ಅಡಿ ಮಾಹಿತಿ ಪಡೆದ ಸಾಕೇತ್ ಗೋಖಲೆ

    ನವದೆಹಲಿ: ಭಾರತದಿಂದ ಪರಾರಿಯಾಗಿ ವಿದೇಶದಲ್ಲಿ ನೆಲೆಸಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಆಭರಣ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ ಒಟ್ಟು 50 ಉದ್ಯಮಿಗಳ 68,607 ಕೋಟಿ ರೂ. ವಸೂಲಾಗದ ಸಾಲವನ್ನು ರಿಸರ್ವ್ ಬ್ಯಾಂಕ್(ಆರ್‌ಬಿಐ) ಮನ್ನಾ(ರೈಟಾಫ್) ಮಾಡಿದೆ.

    ಬ್ಯಾಂಕ್ ಗಳಿಗೆ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾದ ವ್ಯಕ್ತಿಗಳ ಪೈಕಿ ಯಾರ ಸಾಲವನ್ನು ಸರ್ಕಾರ ಎಷ್ಟು ಪ್ರಮಾಣದಲ್ಲಿ ರೈಟಾಫ್ ಮಾಡಿದೆ? ಈ ಮಾಹಿತಿ ನೀಡಿ ಎಂದು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ಆರ್‌ಬಿಐ ಈ ಉತ್ತರವನ್ನು ನೀಡಿದೆ.

     

    RBI reuters

    ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೆ  ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಖಾತೆಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಉತ್ತರ ನೀಡಲು ನಿರಾಕರಿಸಿದ್ದರು. ಈ ಕಾರಣಕ್ಕೆ ನಾನು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದೆ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಾಕೇತ್ ಗೋಖಲೆ, ಆರ್‌ಬಿಐನ ಮಾಹಿತಿ ಅಧಿಕಾರಿ ಅಭಯ್ ಕುಮಾರ್ ಅವರು 2019ರ ಸೆಪ್ಟೆಂಬರ್ 30 ರವರೆಗಿನ 68,607 ಕೋಟಿ ರೂ. ಸುಸ್ತಿಸಾಲವನ್ನು ತಾಂತ್ರಿಕವಾಗಿ ಮನ್ನಾ ಮಾಡಲಾಗಿದೆ ಎಂದು ಏ.24ರಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

    Nirmala Sitharaman 3

    2015 ಡಿಸೆಂಬರ್ 16ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಆರ್‌ಬಿಐ ವಿದೇಶಿ ಸುಸ್ತಿಗಾರರ ಮಾಹಿತಿಯನ್ನು ನೀಡಿಲ್ಲ. ಸುಸ್ತಿದಾರರು ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾಲವನ್ನು ಪಡೆದು ವಂಚಿಸಿದ್ದಾರೆ. ಈ ಪೈಕಿ ಕೆಲವರು ದೇಶ ಬಿಟ್ಟು ಪರಾರಿಯಾಗಿದ್ದು ಅವರ ವಿರುದ್ಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮೆಹುಲ್ ಚೋಕ್ಸಿ ಇದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ಸಾಲ ಮರುಪಾವತಿಸದೆ ಬಾರ್ಬಡೋಸ್‍ನ ಆಂಟಿಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಜೆಮ್ಸ್‍ನ 5,492 ಕೋಟಿ ರೂ. ಗಿಲಿ ಇಂಡಿಯಾ ಲಿಮಿಟೆಡ್‍ನ 1,447 ಕೋಟಿ ರೂ. ಹಾಗೂ ನಕ್ಷತ್ರ ಬ್ರಾಂಡ್ಸ್ ನ 1,109 ಕೋಟಿ ರೂ. ಸಾಲ ಮನ್ನಾವಾಗಿದೆ.

    pnb 660 052218074928

    ಲಂಡನ್‍ನಲ್ಲಿದ್ದು ಕಾನೂನು ಹೋರಾಟ ನಡೆಸುತ್ತಿರುವ ವಿಜಯ್ ಮಲ್ಯ ಅವರ ಕಿಂಗ್‍ಫಿಶರ್ ಏರ್‍ಲೈನ್ಸ್‍ನ 1,943 ಕೋಟಿ ರೂ., ರುಚಿ ಸೋಯಾ ಕಂಪನಿಯ 2,212 ಕೋಟಿ ರು. ಸುಸ್ತಿಸಾಲ ಕೂಡ ಮನ್ನಾ ಮಾಡಲಾಗಿದೆ.

    ಯಾರ ಸಾಲ ಎಷ್ಟು ಮನ್ನಾ?
    ಮೆಹುಲ್ ಚೋಕ್ಸಿ – 8,048 ಕೋಟಿ ರೂ.
    ಆರ್‍ಇಐ ಅಗ್ರೋ ಲಿ. 4,314 ಕೋಟಿ ರೂ.
    ವಿನ್ಸಮ್ ಡೈಮಂಡ್ಸ್ – 4,076 ಕೋಟಿ ರೂ.

    kingfisher villa mallya

    ರೊಟೋಮ್ಯಾಕ್ ಗ್ಲೋಬಲ್ – 2,850 ಕೋಟಿ ರೂ.
    ಕುಡೋಸ್ ಕೆಮಿ, ಪಂಜಾಬ್ – 2,326 ಕೋಟಿ ರೂ.
    ರುಚಿ ಸೋಯಾ ಇಂಡಸ್ಟ್ರೀಸ್ – 2,212 ಕೋಟಿ ರೂ.
    ಜೂಮ್ ಡೆವಲಪರ್ಸ್ – 2,012 ಕೋಟಿ ರೂ.
    ಕಿಂಗ್‍ಫಿಶರ್ ಏರ್‍ಲೈನ್ಸ್ – 1,943 ಕೋಟಿ ರೂ.
    ಫಾರೆವರ್ ಪ್ರಿಶಿಯಸ್ ಜುವೆಲ್ಲರಿ -1,962 ಕೋಟಿ ರೂ.

    RBI write off Bank 1

    ಒಟ್ಟು 18 ಕಂಪನಿಗಳು 1 ಸಾವಿರ ಕೋಟಿ ಸಾಲ ಮಾಡಿದ್ದರೆ 25 ಕಂಪನಿಗಳು 1 ಸಾವಿರ ಕೋಟಿ ರೂ.ಗಿಂತ ಕಡಿಮೆ ಸಾಲ ಮಾಡಿದೆ. 50 ಮಂದಿ ಸುಸ್ತಿದಾರರ ಪೈಕಿ 6 ಮಂದಿ ವಜ್ರ ಮತ್ತು ಚಿನ್ನದ ಉದ್ಯಮಗಳನ್ನು ನಡೆಸಿದವರಾಗಿದ್ದಾರೆ.

    RBI write off Bank 2

    ರೈಟಾಫ್ ಎಂದರೇನು?
    ಸರ್ಕಾರಗಳು ರೈತರ ಸಾಲಮನ್ನಾ ಮಾಡಿದಂತೆ ಉದ್ಯಮಿಗಳ ಸಾಲವನ್ನು ಬ್ಯಾಂಕುಗಳು ಮನ್ನಾ ಮಾಡುವುದಿಲ್ಲ. ಕೋಟ್ಯಂತರ ರೂ ಸಾಲ ಮಾಡಿ ದೇಶ ತೊರೆದ ಉದ್ಯಮಿಗಳನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಬ್ಯಾಂಕುಗಳು ಮೊದಲೇ ಗುರುತಿಸುತ್ತದೆ. ಸಾಲ ಪಾವತಿಸದೇ ಇದ್ದರೆ ಕೋಟ್ಯಂತರ ರೂ. ಸಾಲ ಬ್ಯಾಲೆನ್ಸ್ ಶೀಟ್ ನಲ್ಲಿ ಹಾಗೆಯೇ ಇರುತ್ತದೆ. ಈ ಸಾಲವನ್ನು ಬ್ಯಾಲೆನ್ಸ್ ಶೀಟ್ ನಿಂದ ತೆಗೆದು ಹಾಕಲು ರೈಟಾಫ್ ಮಾಡುತ್ತದೆ. ರೈಟಾಫ್ ಮಾಡಿದರೂ ಉದ್ಯಮಿಗಳ ಸಾಲ ವಸೂಲಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ) ವಂಚನೆಗೈದವರ ವಿರುದ್ಧ ತನಿಖೆ ನಡೆಸುತ್ತಿರುತ್ತದೆ. ಮುಂದೆ ಈ ಸಾಲ ವಸೂಲಾದರೆ ಲೆಕ್ಕಪತ್ರದಲ್ಲಿ ಅದನ್ನು ಲಾಭ ಎಂಬುದಾಗಿ ತೋರಿಸುತ್ತದೆ.