Tag: ಬಾಲಕೋಟ್

  • ಏರ್ ಸ್ಟ್ರೈಕ್‍ನಲ್ಲಿ ಹೆಚ್ಚಿನ ಹಾನಿ ಆಗಿಲ್ಲ: ಕೇಂದ್ರ ಸಚಿವ ಅಹ್ಲುವಾಲಿಯಾ

    ಏರ್ ಸ್ಟ್ರೈಕ್‍ನಲ್ಲಿ ಹೆಚ್ಚಿನ ಹಾನಿ ಆಗಿಲ್ಲ: ಕೇಂದ್ರ ಸಚಿವ ಅಹ್ಲುವಾಲಿಯಾ

    ನವದೆಹಲಿ: ಬಾಲಕೋಟ್‍ನಲ್ಲಿ ನಡೆದ ವಾಯುದಾಳಿಯಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಎಸ್.ಎಸ್ ಅಹ್ಲುವಾಲಿಯಾ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಕೇಂದ್ರ ಸರ್ಕಾರ ವಾಯುದಾಳಿಯಲ್ಲಿ ಯಾವುದೇ ಸಾವನ್ನು ಬಯಸಲಿಲ್ಲ. ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿ ಉಗ್ರರ ನೆಲಗಳನ್ನು ಧ್ವಂಸ ಮಾಡಲು ನಾವು ಸಮರ್ಥರಿದ್ದಾರೆ ಎಂದು ತೋರಿಸಿಕೊಡಲು ಏರ್ ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ನಮ್ಮ  ಶಕ್ತಿ, ಸಾಮರ್ಥ್ಯದ ಪ್ರದರ್ಶನಕ್ಕೆ ಈ ದಾಳಿ ಮಾಡಲಾಗಿದೆ. ನಾನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮವನ್ನು ನೋಡಿದ್ದೇನೆ. ಏರ್ ಸ್ಟ್ರೈಕ್ ನಡೆದ ಬಳಿಕ ನರೇಂದ್ರ ಮೋದಿ ಅವರು ರಾಜಸ್ಥಾನದ ಚುರುವಿನಲ್ಲಿ ಮಾಡಿದ ಭಾಷಣವನ್ನು ಕೇಳಿದ್ದೇನೆ. ಈ ವೇಳೆ 300 ಮಂದಿ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರಾ? ಯಾರಾದರೂ ವಕ್ತಾರರು ಹೇಳಿದ್ದಾರಾ? ಅಮಿತ್ ಶಾ ಹೇಳಿದ್ದಾರಾ ಎಂದು ಅಹ್ಲುವಾಲಿಯಾ ಪ್ರಶ್ನಿಸಿದರು.

    ಈ ಹಿಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಂಗಳವಾರದಂದು ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ತಿಳಿಸಿಲ್ಲ. ಏರ್ ಸ್ಟ್ರೈಕ್  ಬಗ್ಗೆ ನಾವು ಮಾಧ್ಯಮಗಳನ್ನು ನೋಡಿ ಮಾಹಿತಿ ಪಡೆದಿದ್ದೇವೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸಿದ್ದರು.

    ಜೈಷ್ ಉಗ್ರರ ನೆಲೆಯಾದ ಬಾಲಕೋಟ್ ನಲ್ಲಿ ನಡೆದ ವಾಯು ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.

  • ಪಾಕ್‍ನಿಂದ ಗುಂಡಿನ ದಾಳಿ- ಮಹಿಳೆ, ಮಗು ಸೇರಿದಂತೆ ಒಂದೇ ಕುಟುಂಬದ ಮೂವರ ಸಾವು

    ಪಾಕ್‍ನಿಂದ ಗುಂಡಿನ ದಾಳಿ- ಮಹಿಳೆ, ಮಗು ಸೇರಿದಂತೆ ಒಂದೇ ಕುಟುಂಬದ ಮೂವರ ಸಾವು

    – ಹಲವರಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪೂಂಚ್ ಜಿಲ್ಲೆಯ ಸಲೋತ್ರಿ ಇಲಾಖೆಯಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ಚಕಮಕಿಯಲ್ಲಿ ಮಹಿಳೆ ಮತ್ತು ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಪೂಂಚ್, ಮನಕೋಟ್, ಬಾಲಕೋಟ್ ಮತ್ತು ನೌಶೆರಾ ಬಳಿಯಲ್ಲಿ ಪಾಕಿಸ್ತಾನಿಗಳು ಗುಂಡಿನ ದಾಳಿ ನಡೆಸುತ್ತಿದ್ದು, ಭಾರತೀಯ ಸೈನಿಕರು ಪ್ರತ್ಯುತ್ತರ ನೀಡುತ್ತಿದ್ದಾರೆ. ಒಂದು ವಾರದಲ್ಲಿ ಪಾಕಿಸ್ತಾನದ ಸೈನಿಕರು 60ಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ.

    ಪಾಕಿಸ್ತಾನ ಸೇನೆ ಪೂಂಚ್, ಮನಕೋಟ್, ಬಾಲಕೋಟ್ ಮತ್ತು ನೌಶೆರಾ ಭಾಗದಲ್ಲಿಯ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ನಮ್ಮ ಸೇನೆಯ ಸೈನಿಕರು ಸಹ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದ್ದಾರೆ. ಸಲೋತ್ರಿ ವಿಭಾಗದ ಜನರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಸಲೋತ್ರಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇದೇ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾರೆಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಹೇಳಿದ್ದಾರೆ.

    ಉಗ್ರರು ಮತ್ತು ಸೇನಾಪಡೆಗಳ ನಡುವೆ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದು, ಓರ್ವ ನಾಗರಿಕ ಕೂಡ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಲ್ಲಿ ಉಗ್ರಗಾಮಿಯೋರ್ವ ಸತ್ತಂತೆ ನಟಿಸಿದ್ದು, ಹತ್ತಿರ ಬರುತ್ತಿದ್ದ ಸೇನಾಪಡೆ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಈ ವೇಳೆ ಸಿಆರ್ ಪಿಎಫ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇತ್ತ ಸತ್ತಂತೆ ನಟಿಸಿ ಯೋಧರನ್ನು ಕೊಂದ ಉಗ್ರ ಕೂಡ ಫಿನೀಶ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ 5 ಪ್ರಮುಖ ಕಾರಣಗಳು

    ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ 5 ಪ್ರಮುಖ ಕಾರಣಗಳು

    ನವದೆಹಲಿ: ಬಾಲ್‍ಕೋಟ್ ಜೈಷ್ ಉಗ್ರ ಸಂಘಟನೆಯ ಪ್ರಮುಖ ಕೇಂದ್ರ. ಅಲ್ಲಿ ಉಗ್ರರ ತರಬೇತಿ, ತರಬೇತುದಾರರು, ಶಸ್ತ್ರಾಸ್ತ್ರ ಸಂಗ್ರಹ ಮಾಡಲಾಗಿತ್ತು ಅಂತ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದರು. ಅಲ್ಲದೆ ಈ ಕ್ಯಾಂಪನ್ನು ಉಡಾಯಿಸದೇ ಹೋಗಿದ್ದಲ್ಲಿ ಭಾರತದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿ ನಡೀತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ ಐದು ಪ್ರಮುಖ ಕಾರಣಗಳಿವೆ.

    1. ಉಗ್ರರಿಗೆ ಪಾಕಿಸ್ತಾನದ ಯಾವುದೇ ತಾಣ ಸುರಕ್ಷಿತವಲ್ಲ
    ಭಾರತ ಇದೇ ಮೊದಲ ಬಾರಿಗೆ ವೈಮಾನಿಕ ದಾಳಿ ಬಗ್ಗೆ ಹಾಕಿಕೊಂಡಿದ್ದ ತನ್ನ ಮಾನಸಿಕ ಬೇಲಿಯನ್ನು ಮೀರಿ ಹೊರ ಬಂತು. 12 ಎಐಎಫ್ ಫೈಟರ್ ಜೆಟ್‍ಗಳು ಪಾಕ್ ವೈಮಾನಿಕ ಪ್ರದೇಶಕ್ಕೆ ನುಗ್ಗಿ ಬಾಲಕೋಟ್, ಚಕೋಟಿ, ಮುಜಾಫರ್‍ಬಾದ್‍ನಲ್ಲಿ ಉಗ್ರರನ್ನು ಸಂಹರಿಸಿದವು. ಅಷ್ಟೇ ಅಲ್ಲ, ಸುರಕ್ಷಿತವಾಗಿ ವಾಪಸ್ ಬಂದವು. ಈ ಮೂಲಕ ಪಾಕಿಸ್ತಾನದಲ್ಲಿರುವ ಯಾವ ಸ್ಥಳವೂ ಉಗ್ರರಿಗೆ ಸುರಕ್ಷಿತವಲ್ಲ. ಅದು ಇಸ್ಲಾಮಾಬಾದ್ ಇರಬೋದು ಅಥವಾ ರಾವಲ್‍ಪಿಂಡಿ ಇರಬೋದು ಅನ್ನೋ ಕಠಿಣ ಸಂದೇಶ ರವಾನಿಸಿತ್ತು.

    Air surgical strike 2

    2. ಯಾವ ಬೆದರಿಕೆಗೂ ಬಗ್ಗಲ್ಲವೆಂದು ಪಾಕ್‍ಗೆ ಪಾಠ
    ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಯಾವುದೇ ಕ್ಷಣದಲ್ಲಿಯೂ ಪ್ರತಿಕಾರ ತೀರಿಸಬಹುದು ಎಂದು 2 ದಿನಗಳ ಹಿಂದಷ್ಟೇ ಪಾಕ್ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ರು. ಆದರೆ, ಪಾಕ್ ಗಡಿ ದಾಟಿ ಬಂದ ಭಾರತೀಯ ಸೇನೆಯನ್ನು ಸುಮ್ಮನೆ ಬಿಡಲ್ಲ. ನಮ್ಮ ಬಳಿಯೂ ಅಣ್ವಸ್ತ್ರ ಇದೆ ಎಂದು ಬೆದರಿಕೆಯೊಡ್ಡಿದ್ದರು. ಇದ್ಯಾವುದಕ್ಕೂ ಕ್ಯಾರೇ ಎನ್ನದ ವಾಯುಸೇನೆ 12 ಜೆಟ್‍ಗಳ ಮೂಲಕ ಅವರ ನೆಲಕ್ಕೆ ನುಗ್ಗಿ ಉಗ್ರಾಘಾತ ಮಾಡಿ ಬಂದಿವೆ. ಈ ಮೂಲಕ ನೀವು ಏನ್ ಬೇಕಾದರೂ ಮಾಡಿ ಯಾವ ಬೆದರಿಕೆಗೂ ಬಗ್ಗಲ್ಲ ಅಂತ ಸೇನೆ ಹೇಳಿ ಬಂದಿದೆ.

    3. ಉಗ್ರರ ಕ್ಯಾಂಪ್‍ಗಳೇ ಟಾರ್ಗೆಟ್
    ಪಾಕಿಸ್ತಾನದ ಜೈಷ್ ಉಗ್ರರು ಅಡಗುವ ಪ್ರದೇಶಗಳು ಜನಸಂದಣಿಯಿಂದ ಕೂಡಿರುತ್ತವೆ. ಲಾಹೋರ್ ಬಳಿಯ ಜೈಶ್ ಹೆಡ್‍ಕ್ವಾಟ್ರಸ್ ಮುಂದಕ್ಕೆ ಅಥವಾ ದಕ್ಷಿಣ ಪಂಜಾಬ್‍ನ ಬಹವಾಲ್‍ಪುರದ ಕೇಂದ್ರಗಳು ಇದಕ್ಕೆ ಉದಾಹರಣೆ. ಕೈಬರ್ ಪಖ್ತುಂಖ್ವಾದ ಉಗ್ರ ತರಬೇತಿ ಕೇಂದ್ರ ದಟ್ಟ ಅರಣ್ಯದಲ್ಲಿದೆ. ಹಾಗಾಗಿ ಇದನ್ನೇ ಉಡೀಸ್ ಮಾಡುವ ಎಂದು ತಳಮಟ್ಟದಲ್ಲಿ ದಾಳಿ ನಡೆಸುವ ಸಾಮಥ್ರ್ಯದೊಂದಿಗೆ 12 ಜೆಟ್‍ಗಳು ಉಗ್ರರ ಕ್ಯಾಂಪ್‍ಗಳನ್ನು ಟಾರ್ಗೆಟ್ ಮಾಡಿದವು. ಹೀಗಾಗಿ ಜನರ ಜೀವಹಾನಿಗೆ ಆಸ್ಪದವೇ ಕೊಡಲಿಲ್ಲ.

    Air surgical strike 1

    4. ಭಾರತದ ತಾಂತ್ರಿಕ ಶ್ರೇಷ್ಠತೆ ಪ್ರದರ್ಶನ
    ಪಾಕಿಸ್ತಾನದ ಹದ್ದಿನ ಕಣ್ಣನ್ನು ತಪ್ಪಿಸಿ ಒಳನುಗ್ಗಿದ ಭಾರತೀಯ ಸೇನೆಯ ಯಶಸ್ಸಿನ ಜೊತೆಗೆ ನಮ್ಮ ದೇಶದ ಐಎಎಫ್‍ನ ತಾಂತ್ರಿಕ ಶ್ರೇಷ್ಠತೆ ಕೂಡ ಸಾಬೀತಾಗಿದೆ. ಅಮೆರಿಕದಲ್ಲಿ ಸಿದ್ಧಪಡಿಸಲಾದ ಪಾಕಿಸ್ತಾನದ ರಡಾರ್ ರಕ್ಷಣೆಯನ್ನು ಭೇದಿಸಿದ ಮಿರಾಜ್ ಜೆಟ್‍ಗಳು ಕಣ್ಮುಚ್ಚಿ ಕಣ್ತೆರೆಯುವಂತೆ ಮಿಂಚಿನ ಸಂಚಾರದ ದಾಳಿ ಮಾಡಿ ಉಗ್ರರ ಹೆಡೆಮುರಿ ಕಟ್ಟಿದೆ. ಈ ಮೂಲಕ ತನ್ನ ಟೆಕ್ನಿಕಲ್ ಸುಪಿರಿಯಾರಿಟಿಯನ್ನು ಜಗತ್ತಿಗೇ ಪ್ರದರ್ಶಿಸಿದೆ.

    5. ಜಾಗತಿಕ ಮಟ್ಟದಲ್ಲಿ ಭಾರತಕ್ಕಿಲ್ಲ ಆತಂಕ
    ಜಾಗತಿಕ ಮಟ್ಟದಲ್ಲೂ ವಿರೋಧ ಕಟ್ಟಿಕೊಳ್ಳಬಾರದು. ಉಗ್ರರನ್ನು ಸುಮ್ಮನೆ ಬಿಡಬಾರದು ಎಂದು ನಡೆಸಿದ ಏರ್ ಸ್ಟ್ರೈಕ್ ಸಕ್ಸಸ್ ಆಗಿದೆ. ಯಾಕಂದ್ರೆ, ವಿಶ್ವದ ಯಾವ ದೇಶವೂ ಸಹ ಭಾರತದ ದಾಳಿಯ ಬಗ್ಗೆ ಆಕ್ಷೇಪ ಎತ್ತಿಲ್ಲ. ಜೊತೆಗೆ ಭಾರತ ಈ ದಾಳಿಯನ್ನು ಯುದ್ಧ ಎಂದು ಒಪ್ಪಿಕೊಂಡಿಲ್ಲ. ನಾವು ಯಾವುದೇ ಯುದ್ಧ ಸಾರುತ್ತಿಲ್ಲ, ದಾಳಿಯನ್ನಷ್ಟೇ ಮಾಡಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿದೆ. ಅಷ್ಟರ ಮಟ್ಟಿಗೆ ನಮ್ಮ ಯೋಧರು ತಮ್ಮ ಟಾರ್ಗೆಟ್, ಆಪರೇಷನ್ ಅನ್ನು ಫಿನಿಶ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಇಸ್ಲಾಮಾಬಾದ್: ಭಾರತೀಯ ವಾಯು ಪಡೆ ಏರ್‌ ಸ್ಟ್ರೈಕ್ ದಾಳಿ ನಡೆಸಿದಾಗ ಕತ್ತಲಾಗಿತ್ತು. ಹೀಗಾಗಿ ಪ್ರತಿದಾಳಿ ಮಾಡಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟಕ್ ತಿಳಿಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯಿಂದ ತತ್ತರಿಸಿದ್ದ ಪಾಕಿಸ್ತಾನ ಇಂದು ಸುದ್ದಿಗೋಷ್ಠಿ ಕರೆದು ಭಾರತದ ವಿರುದ್ಧ ಪ್ರತಿದಾಳಿ ನಡೆಸುತ್ತೇವೆ ಎಂದು ಹೇಳಿದೆ. ಈ ವೇಳೆ ಮಾಧ್ಯಮದವರು, ದಾಳಿಯ ವೇಳೆ ಪಾಕಿಸ್ತಾನ ವಾಯು ಪಡೆಯ ಏನು ಮಾಡುತ್ತಿತ್ತು? ಯಾಕೆ ಪ್ರತಿ ದಾಳಿ ನಡೆಸಲಿಲ್ಲ ಎಂದು ಪ್ರಶ್ನೆ ಕೇಳಿದ್ದಾರೆ.

    ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ದಾಳಿಯು ಮುಂಜಾನೆ ಸುಮಾರು 3 ಗಂಟೆಯ ವೇಳೆ ನಡೆದಿದೆ. ಭಾರತೀಯ ವಾಯು ಪಡೆಯು ಗಡಿಯನ್ನು ದಾಟಿ 5 ರಿಂದ 6 ಕಿ.ಮೀ. ಒಳಗಡೆ ಪ್ರವೇಶಿಸಿ, ಬಾಂಬ್ ಹಾಕಿದ್ದಾರೆ. ರಾತ್ರಿ ದಾಳಿ ನಡೆದಿದ್ದರಿಂದ ಎಷ್ಟು ನಷ್ಟವಾಗಿದೆ ಎಂದು ತಿಳಿದಿಲ್ಲ. ಈ ವೇಳೆ ನಮ್ಮ ಏರ್‍ಫೋರ್ಸ್ ಸಿದ್ಧವಾಗಿತ್ತು. ಆದರೆ ಕತ್ತಲಾಗಿದ್ದರಿಂದ ಯುದ್ಧ ವಿಮಾನ ಹಾರಾಟ ಸಾಧ್ಯವಾಗಲಿಲ್ಲ ಎಂದು ಹೇಲಿದ್ದಾರೆ.

    https://twitter.com/justgtin/status/1100385235928199170

    ದಾಳಿಗೆ ಪ್ರತ್ಯುತ್ತರ ನೀಡಲು ನಮ್ಮ ವಾಯು ಪಡೆ ಸಿದ್ಧವಾಗಿದ್ದು, ನಮ್ಮ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಸದ್ಯದಲ್ಲಿಯೇ ಭಾರತೀಯ ವಾಯುಪಡೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಪಕ್ಕದಲ್ಲೇ ಕುಳಿತಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಮಾತನಾಡಿ, ದಾಳಿಯ ಕುರಿತು ರಕ್ಷಣಾ ಸಚಿವಾಲಯದ ಜೊತೆಗೆ ಚರ್ಚೆ ಮಾಡಿದ್ದೇನೆ. ಪಾಕಿಸ್ತಾನ ವಾಯು ಪಡೆ ಪ್ರತಿದಾಳಿಗೆ ಸಿದ್ಧವಾಗಿದ್ದು, ಇದು ಬಹುರೂಪದ ದಾಳಿಯಾಗಿರುತ್ತದೆ ಎಂದು ತಿಳಿಸಿದರು.

    balakot 2

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ನವದೆಹಲಿ: ಭಾರತೀಯ ವಾಯು ಪಡೆ ದಾಳಿಗೆ ಯಾವುದೇ ಹಾನಿ ಸಂಭವಿಸಿಲ್ಲವೆಂದು ಪಾಕಿಸ್ತಾನ ಮೊಂಡುವಾದ ಮುಂದುವರಿಸಿತ್ತು. ಆದರೆ ಬಾಲಕೋಟ್ ನಿವಾಸಿಗಳು ಏರ್ ಸ್ಟ್ರೈಕ್‍ನಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳುವ ಮೂಲಕ ಪಾಕ್ ಮೊಂಡುವಾದವನ್ನು ಬಯಲು ಮಾಡಿದ್ದಾರೆ.

    ಯುದ್ಧದ ರೀತಿಯಲ್ಲಿ ಇಂದು 3 ಗಂಟೆ ಸುಮಾರು ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿ ಬಂತು. ಅದು ಹವಾಮಾನ ವೈಪರಿತ್ಯದಂತೆ ನಮ್ಮನ್ನು ತಲ್ಲಣಗೊಳಿಸಿತ್ತು. ಇದರಿಂದಾಗಿ ಇಡೀ ರಾತ್ರಿ ನಾವು ನಿದ್ರಿಸಲು ಸಾಧ್ಯವಾಗಲಿಲ್ಲ. ಶಬ್ಧ ಕೇಳಿಬಂದ 5 ರಿಂದ 10 ನಿಮಿಷದಲ್ಲಿ ಮೂರು ಸ್ಫೋಟಗಳು ಸಂಭವಿಸಿದವು. ಪರಿಣಾಮ ಕಟ್ಟಡಗಳು ನೆಲ ಸಮವಾದವು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದನ್ನು ನಾವು ನೋಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

    balakot

    ಅಷ್ಟೇ ಅಲ್ಲದೆ ದಾಳಿಯ ಅವಶೇಷಗಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ. ಈ ಮೂಲಕ ದಾಳಿಯಿಂದ ಪಾಕಿಸ್ತಾನದ ಮೊಂಡುವಾದ ಬಯಲಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಗಫೂರ್, ಭಾರತದ ವಾಯು ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಹೇಳಿ ಮೊಂಡುತನ ಪ್ರದರ್ಶನ ಮಾಡಿದ್ದರು. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    pakisthan drone collage

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದರು. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    pak asip gafoor copy

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ವಾಯುಸೇನೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    miraj 2000 1

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ಬಾಲಕೋಟ್: ಭಾರತದ ವಾಯು ಸೇನೆಯ ದಾಳಿಗೆ ಒಳಗಾದ ಬಾಲಕೋಟ್ ನಿವಾಸಿಗಳು ಇಂದು ಬೆಳಗಿನ ಜಾವದ ಅನುಭವವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಯುದ್ಧ ವಿಮಾನಗಳ ಹಾರಾಟದ ಸದ್ದು ಜೋರಾಗಿದ್ದರಿಂದ ಅಲ್ಲಿಯ ನಿವಾಸಿಗಳು ನಿದ್ದೆಯಿಂದ ಎದ್ದು ಭಯದಲ್ಲಿ ಕಾಲ ಕಳೆದಿದ್ದಾರೆ.

    ಬೆಳಗಿನ ಜಾವ 3 ಗಂಟೆಗೆ ದೊಡ್ಡ ದೊಡ್ಡ ಸದ್ದುಗಳು ಕೇಳುತ್ತಿತ್ತು. ಮೊದಲಿಗೆ ವಿಮಾನಗಳು ಹಾರಾಟ ಎಂದು ನಿರ್ಲಕ್ಷ್ಯ ಮಾಡಲಾಗಿತ್ತು. ಸಮಯ ಕಳೆದಂತೆ ವಿಮಾನಗಳ ಸದ್ದು ಹೆಚ್ಚಾಗತೊಡಗಿತು. ಭಯದಿಂದ ರಾತ್ರಿ ನಿದ್ದೆಯ ಮಾಡಲಿಲ್ಲ. ಕೊನೆಗೆ ದಿಢೀರ್ ಅಂತಾ ಎಲ್ಲ ಶಬ್ಧ ನಿಂತು ಹೋಯ್ತು. ಬಾಲಕೋಟ್ ಬಳಿಯ ಕಂಗಡ್ ಎಂಬಲ್ಲಿ ಬಾಂಬ್ ಹಾಕಲಾಗಿದೆ ಎಂದು ಅಲ್ಲಿಯ ನಮ್ಮ ಸಂಬಂಧಿಕರು ತಿಳಿಸಿದರು ಎಂದು ಬಾಲಕೋಟ್ ನಿವಾಸಿ ಮೊಹಮ್ಮದ್ ಆದಿಲ್ ಹೇಳಿದ್ದಾರೆ.

    105799270 whatsappimage2019 02 26at12.46.04pm

    ಬೆಳಗ್ಗೆ ನಾವೆಲ್ಲ ಕಂಗಡ್ ಪ್ರದೇಶಕ್ಕೆ ಹೋದಾಗ ಅಲ್ಲಿ ದೊಡ್ಡ ಕಂದಕಗಳು ಉಂಟಾಗಿದ್ದವು. ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ಓರ್ವ ಗಾಯಗೊಂಡಿದ್ದನು ಎಂದು ತಾವು ನೋಡಿದ್ದನ್ನು ಮೊಹಮ್ಮದ್ ಆದಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಬೆಳಗಿನ ಜಾವ ಮೂರು ಗಂಟೆಯಿಂದ ಆಗಸದಲ್ಲಿ ವಿಮಾನಗಳ ಹಾರಾಟ ಹೆಚ್ಚಾಯ್ತು. ಮೊದಲಿಗೆ ಗುಂಡು ಹಾರುವ ಸದ್ದು ಕೇಳಿತು. ಇದಾದ ಕೆಲವೇ ನಿಮಿಷಗಳಲ್ಲಿ ಮೂರು ಬಾರಿ ದೊಡ್ಡ ಶಬ್ಧ ಕೇಳಿಸಿತು. ಮೂರನೇ ಬಾರಿಗೆ ದೊಡ್ಡ ಸದ್ದು ಕೇಳಿದ ಕೂಡಲೇ ಎಲ್ಲವೂ ಶಾಂತವಾಯ್ತು ಎಂದು ಬಾಲಕೋಟ್‍ನ ಮತ್ತೋರ್ವ ನಿವಾಸಿ ವಾಜಿದ್ ಶಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

    https://www.youtube.com/watch?v=rfZHzL93mzs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv