Tag: ಅಶ್ವತ್ಥನಾರಾಯಣಸ್ವಾಮಿ ದೇವಾಲಯ

  • ಕಂಪ್ಯೂಟರ್ ಆಪರೇಟರ್ ಜೊತೆ ಸರ್ಕಾರಿ ಅಧಿಕಾರಿ ಆಟ – ದೇವರಿಗೆ 60 ಲಕ್ಷ ರೂ. ಪಂಗನಾಮ

    ಕಂಪ್ಯೂಟರ್ ಆಪರೇಟರ್ ಜೊತೆ ಸರ್ಕಾರಿ ಅಧಿಕಾರಿ ಆಟ – ದೇವರಿಗೆ 60 ಲಕ್ಷ ರೂ. ಪಂಗನಾಮ

    – ವಿದುರಾಶ್ವತ್ಥ ದೇಗುಲದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ
    – ಅವ್ಯವಹಾರ ಬಯಲಿಗೆ ಎಳೆದ ತಹಶೀಲ್ದಾರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಐತಿಹಾಸಿಕ ಪುರಾತನ ಪ್ರಸಿದ್ಧ ವಿದುರಾಶ್ವತ್ಥ ಗ್ರಾಮದ ಶ್ರೀ ಅಶ್ವತ್ಥನಾರಾಯಣಸ್ವಾಮಿ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರದ ಪ್ರಕರಣ ಬಯಲಿಗೆ ಬಂದಿದೆ.

    ದೇವಾಲಯ ಆಡಳಿತಾಧಿಕಾರಿ ಗುರುಪ್ರಸಾಸ್ ವೆಂಕಟರಮಣ, ಗುತ್ತಿಗೆ ಆಧಾರದ ಮೇಲೆ ಬೇಸಿಕ್ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದ ಶೃತಿ ಹಾಗೂ ಡಿ ಗ್ರೂಪ್ ನೌಕರ ಸುರೇಶ್ ಸೇರಿ ದೇವಸ್ಥಾನದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಗೌರಿಬಿದನೂರು ತಹಶೀಲ್ದಾರ್ ಹಾಗೂ ಹಾಲಿ ದೇವಾಲಯದ ಪ್ರಭಾರ ಕಾರ್ಯ ನಿರ್ವಹಕಾಧಿಕಾರಿ ಶ್ರೀನಿವಾಸ್ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಇಲಾಖೆಯ ಆಯಕ್ತರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

    CKB Vidurashwatha Narayana Temple D

    ವರದಿಯಲ್ಲಿ ಏನಿದೆ?
    ವೆಂಕಟರಮಣ ಗುರುಪ್ರಸಾದ್ 2017ರ ಆಗಸ್ಟ್ 02 ರಿಂದ 2019ರ ಆಗಸ್ಟ್ 26ರವರೆಗೆ ವಿದುರಾಶ್ವತ್ಥನಾರಾಯಣ ದೇಗುಲದಲ್ಲಿ ಕಾರ್ಯ ನಿರ್ವಹಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸಮಯದಲ್ಲಿ ಚೆಕ್‍ಗಳ ವಿತರಣೆಯಲ್ಲಿ ಲೋಪ ದೋಷಗಳನ್ನು ಮಾಡಿ ಹಣ ದುರ್ಬಳಕೆ ಆಗಿರುವುದು ಕಂಡುಬಂದಿರುತ್ತದೆ. ಚೆಕ್ ವಿತರಣೆ ಉಸ್ತುವಾರಿ ವಹಿಸಿಕೊಂಡಿದ್ದ ಡಾಟಾ ಎಂಟ್ರಿ ಆಪರೇಟರ್ ಶೃತಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿರುತ್ತಾರೆ. ಹೀಗಾಗಿ ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಅರ್ಚಕರ ದೀಪಾರಾಧನೆಗೆ ಅಂತ 50 ಸಾವಿರ ರೂ. ಹೆಚ್ಚುವರಿ ಹಣ, ಮುಡಿ ತೆಗೆಯುವವರಿಗೆ ಅಂತ 7,57,779 ರೂ. ನೀಡಲಾಗಿದೆ.

    ಶೃತಿ ತಾಯಿ ಪರಿಮಳಾ ಅವರಿಗೆ ಅನಾವಶ್ಯಕವಾಗಿ 7,27,000 ರೂ. ನೀಡಲಾಗಿದೆ. ದೇವಾಲಯದ ನಾಗಪ್ರತಿಷ್ಠೆ ಸೇವಾಕರ್ತರ ಊಟೋಪಚಾರಕ್ಕಾಗಿ 18.85 ಲಕ್ಷದ ರೂ. ಹೆಚ್ಚುವರಿ ಹಣ, ಅನಾಮಧೇಯರಿಗೆ ಅನಾವಶ್ಯಕವಾಗಿ 2.58 ಲಕ್ಷ ರೂಪಾಯಿ ವಿತರಿಸಿದ್ದಾರೆ. ಹೀಗೆ ದೇವಾಲಯದ ಹಣದಲ್ಲಿ 60 ಲಕ್ಷ ರೂಪಾಯಿಗೂ ಅಧಿಕ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬಗ್ಗೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ವರದಿ ನೀಡಿರುವುದಾಗಿ ತಹಶೀಲ್ದಾರ್ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    CKB Vidurashwatha Narayana Temple A

    ಅವ್ಯವಹಾರ ಹೇಗೆ?
    ದೇವಾಲಯದಲ್ಲಿ ನಾಗಪ್ರತಿಷ್ಠಾಪನೆ ಮಾಡುವ ಭಕ್ತರ ಅನುಕೂಲ ಊಟೋಪಚಾರಕ್ಕೆ ಅಂತ ದೇವಾಲಯದ ನಿಧಿಯಿಂದ ಒಂದು ನಾಗಪ್ರತಿಷ್ಠಪನಾ ಕಾರ್ಯಕ್ಕೆ ತಲಾ 800 ರೂಪಾಯಿ ಖರ್ಚು ಮಾಡಬಹುದು. ಹೀಗೆ 2019 ಏಪ್ರಿಲ್ 1ರಿಂದ 2019ರ ಆಗಸ್ಟ್ 31 ರವರೆಗೆ 363 ನಾಗಪ್ರತಿಷ್ಠಾಪನೆ ಆಗಿದೆ. ಆ ಭಕ್ತರಿಗೆ 2,90,400 ರೂಪಾಯಿ ಖರ್ಚು ಮಾಡಬಹುದು. ಆದರೆ ನಾಗಪ್ರತಿಷ್ಠಾಪನೆ ಊಟೋಪಚಾರದ ಹೆಸರಲ್ಲಿ ಹೆಚ್ಚುವರಿಯಾಗಿ 18.85 ಲಕ್ಷ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಹೀಗೆ ಮುಡಿ ತೆಗೆಯುವವರಿಗೆ 600 ರೂಪಾಯಿ ಕೊಡುವ ವ್ಯವಹಾರದಲ್ಲಿ 60 ಸಾವಿರ ರೂ.ನಂತೆ ಹಣ ಡ್ರಾ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ.

    ಈ ಸಂಬಂಧ ದೇವಾಲಯದ ಖಾತೆಯಿಂದ ಚೆಕ್ ಪಡೆದವರನ್ನು ಕರೆಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ನಮಗೆ ಅಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿಯಾಗಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ವೇಳೆ ಡಾಟಾ ಎಂಟ್ರಿ ಆಪರೇಟರ್ ಶೃತಿ ಹಾಗೂ ಸ್ವೀಪರ್ ಸುರೇಶ್ ನಮಗೆ ಬರಬೇಕಾದ ಹಣವನ್ನು ನಗದು ರೂಪದಲ್ಲಿ ನೀಡಿ ಚೆಕ್ ಅನ್ನು ಅವರೇ ಬ್ಯಾಂಕಿನಲ್ಲಿ ಡ್ರಾ ಮಾಡಿಕೊಳ್ಳುತ್ತಿದ್ದರು. ಚೆಕ್‍ಗಳಲ್ಲಿ ಎಷ್ಟು ಮೊತ್ತದ ಹಣ ಇರುತ್ತಿತ್ತು ಎಂಬುದು ನಮಗೆ ಗೊತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಶೃತಿ ಹಾಗೂ ಸುರೇಶ್ ಮೌನ ವಹಿಸಿದ್ದು, ತಪ್ಪನ್ನ ಒಪ್ಪಿಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    CKB Vidurashwatha Narayana Temple C

    ಬಯಲಿಗೆ ಬಂದಿದ್ದು ಹೇಗೆ?
    ಈ ಹಿಂದೆ ಕಾರ್ಯನಿರ್ವಾಹಾಧಿಕಾರಿ ವೆಂಕಟರಮಣ ಗುರುಪ್ರದಾದ್ ಬೇರೆಡೆಗೆ ವರ್ಗಾವಣೆಯಾದಾಗ ನೂತನ ಪ್ರಭಾರ ಕಾರ್ಯನಿರ್ವಾಹಕಾಧಿಕಾರಿಯಾಗಿ ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್ ಅವರನ್ನ ನೇಮಕ ಮಾಡಲಾಗಿದೆ. ಈ ವೇಳೆ ಕಚೇರಿಯ ಕಡತ, ಲೆಕ್ಕದ ಬುಕ್‍ಗಳ ಪರಿಶೀಲನೆಯಲ್ಲಿ ತೊಡಗಿದ್ದ ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಅವ್ಯವಹಾರದ ವಾಸನೆ ಕಂಡು ಬಂದಿತ್ತು. ಈ ವಿಚಾರವಾಗಿ ಸಿಬ್ಬಂದಿಯನ್ನು ವಿಚಾರಿಸಿ ಬ್ಯಾಂಕ್‍ನ ವಹಿವಾಟುಗಳನ್ನ ಪರಿಶೀಲನೆ ನಡೆಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ. ಹೀಗಾಗಿ ಈ ಸಂಬಂಧ ಸಂಪೂರ್ಣ ಪರಿಶೀಲನೆ ನಡೆಸಿದಾಗ ಸರಿ ಸುಮಾರು 60 ಲಕ್ಷ ರೂ.ಗೂ ಅಧಿಕ ಹಣ ದುರುಪಯೋಗವಾಗಿರುವ ಬಗ್ಗೆ ಶ್ರೀನಿವಾಸ್ ವರದಿ ನೀಡಿದ್ದಾರೆ.

    ದೇವಾಲಯದ ಮಹತ್ವ..!
    ವಿಧುರಾಶ್ವತ್ಥ ಗ್ರಾಮದ ಬಳಿಯಿರುವ ಈ ದೇವಾಲಯದಲ್ಲಿ ನಾಗದೋಷ, ಸಂತಾನಭಾಗ್ಯ ವಿವಾಹಭಾಗ್ಯದ ಇಷ್ಟಾರ್ಥ ಕೋರಿಕೆಗೆ ನಾಗರಕಲ್ಲು ಪ್ರತಿಷ್ಠಾಪನೆ ಮಾಡೋದು ಪ್ರತೀತಿ. ಪ್ರತಿದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ನಾಗರಕಲ್ಲು ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ದೇವಸ್ಥಾನಕ್ಕೆ ಬಂದ ಭಕ್ತರು ವಿವಿಧ ಕಾರಣಗಳಿಗಾಗಿ ದೇವರಿಗೆ ಕಾಣಿಕೆ, ಸೇವೆ ಅಂತ ಹಣ ಸಂದಾಯ ಮಾಡುತ್ತಾರೆ. ಹೀಗೆ ಹಣ ಸಂದಾಯವಾದ ಹಣವನ್ನು ದೇವಸ್ಥಾನದ ಆಡಳಿತಾಧಿಕಾರಿ ಆಗಿದ್ದ ಗುರುಪ್ರಸಾದ್, ದೇವಸ್ಥಾನದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಶೃತಿ ಹಾಗೂ ಸುರೇಶ್ ಸೇರಿಕೊಂಡು ಮನಸ್ಸೊ ಇಚ್ಛೆ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

    CKB Vidurashwatha Narayana Temple E

    ದೇವಸ್ಥಾನದಲ್ಲಿ ಭಕ್ತರು ಸಂದಾಯ ಮಾಡುವ ಹಣವನ್ನು, ವಿಧುರಾಶ್ವತ್ಥ ಗ್ರಾಮದಲ್ಲಿರುವ ಸ್ಥಳೀಯ ಬ್ಯಾಂಕ್‍ನಲ್ಲಿರುವ ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಆದರೆ ದೇವಸ್ಥಾನದ ಆಡಳಿತಾಧಿಕಾರಿ ಆಗಿದ್ದ ಗುರುಪ್ರಸಾದ್, ಶೃತಿ ಹಾಗೂ ಸುರೇಶ್ ಚೆಕ್‍ಗಳನ್ನು ತಿದ್ದಿ ಐನೂರು ರೂ. ಚೆಕ್ ಅನ್ನು ಐದು ಸಾವಿರ ಎಂದು, 50 ಸಾವಿರ ರೂಪಾಯಿ ಚೆಕ್ ಅನ್ನು ಐವತ್ತು ಸಾವಿರ ಎಂದು, ಐವತ್ತು ಸಾವಿರ ರೂಪಾಯಿ ಚೆಕ್ ಅನ್ನು 5 ಲಕ್ಷ ರೂಪಾಯಿ ಎಂದು ತಿದ್ದಿ ಹಗಲು ದರೋಡೆ ಮಾಡಿದ್ದಾರೆ. ಆದರೆ ಇದ್ಯಾವುದು ದೇವಸ್ಥಾನದ ವ್ಯವಸ್ಥಾಪಕ ಸದಸ್ಯರ ಗಮನಕ್ಕೆ ಬಂದಿರಲಿಲ್ಲವಂತೆ.

    ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್ ಹಾಗೂ ದೇವಸ್ಥಾನದ ಪೇಸ್ಕಾರ್ ನಂಜಪ್ಪ ಗಮನಕ್ಕೆ ಬರುತ್ತಿದ್ದಂತೆ ಆಯುಕ್ತರಿಗೆ ವರದಿ ನೀಡಿದ್ದಾರೆ. ಮತ್ತೊಂದೆಡೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದೆಡೆ ತಹಶೀಲ್ದಾರ್ ಮತ್ತೊಂದೆಡೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗುರುಪ್ರಸಾದ್ ವರ್ಗಾವಣೆಯಾಗಿ ತಿರುಮಲ ತಿರುಪತಿ ಸೇರಿಕೊಂಡಿದ್ದರೆ, ಇತ್ತ ಶೃತಿ ಹಾಗೂ ಸುರೇಶ್ ಕಚೇರಿಗೆ ಬರದೆ ಕಳ್ಳಾಟ ಆಡುತ್ತಿದ್ದಾರೆ.

    CKB Vidurashwatha Narayana Temple B 1