ಮಂಡ್ಯ: ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ರೆ ನಾವ್ಯಾರು ನಿಲ್ಲೋದೆ ಬೇಡವಾ? ಜೆಡಿಎಸ್ ನ ನಾಯಕರು ಯಾರೂ ನನಗೆ ಕಣಕ್ಕೆ ನಿಲ್ಲಲು ಸೂಚಿಸಿಲ್ಲ. ನಾನೇ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಸುಮಲತಾ ಹೇಳಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಹೆಸರಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಸುಮಲತಾ ಅಂಬರೀಶ್ ಅವರ ವಿರುದ್ಧ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನತೆಗೆ ಸೇವೆ ಸಲ್ಲಿಸಬೇಕು ಎಂದು ಸ್ಪರ್ಧಿಸಲು ತೀರ್ಮಾನಿಸಿದ್ದೆ. ಹಾಗೆಯೇ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದರು. ಬಳಿಕ ಬೇಕು ಅಂತಲೇ ತಮ್ಮ ವಿರುದ್ಧ ತಮ್ಮ ಹೆಸರಿನ ಅಭ್ಯರ್ಥಿಯನ್ನೆ ಕಣಕ್ಕಿಳಿಸಿದ್ದಾರೆ ಎಂಬ ಸುಮಲತಾ ಅಂಬರೀಶ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಗೋತ್ತಿದೆ ಅಂದಮೇಲೆ ಸುಮ್ಮನಿರಲಿ. ಎಲ್ಲಾ ತಿಳಿದುಕೊಂಡಿರುವ ಮೇಲೆ ಸುಮಲತಾ ಅವರು ಮಾತನಾಡುವ ಅವಶ್ಯಕತೆಯೇ ಎಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ
ಈ ಹಿಂದೆ ನಾನು ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆಯಾಗಿದ್ದೆ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಣ ಅಂತ ಮನಸಾಯ್ತು. ಆದರಿಂದ ಸ್ಪರ್ಧೆ ಮಾಡಿದ್ದೇನೆ ಎಂದರು. ಈಗಾಗಲೇ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಆದ್ರೆ ನನಗೂ ಜನಸೇವೆ ಮಾಡಬೇಕು ಎಂದನಿಸಿತ್ತು, ಈಗ ಅವಕಾಶ ಸಿಕ್ಕಿದೆ. ನನಗೆ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನಿಂದ ಯಾರು ಚುನಾವಣೆಗೆ ನಿಲ್ಲಿ ಅಂತ ಒತ್ತಡ ಹಾಕಿಲ್ಲ. ನನಗೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅಂತ ಅನಿಸಿತು ಅದಕ್ಕೆ ನಿಂತಿದ್ದೇನೆ ಎಂದು ತಿಳಿಸಿದರು.
ಬಳಿಕ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ರೆ ನಾವ್ಯಾರು ನಿಲ್ಲುವುದು ಬೇಡವಾ? ನಾವು ರಾಜಕೀಯ ಮಾಡಬಾರದಾ. ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ, ಚುನಾವಣೆ ಎದುರಿಸ್ತೇನೆ. ನಾಮಪತ್ರ ಸಲ್ಲಿಸುವ ವೇಳೆ ಕೂಡ ಜೆಡಿಎಸ್ನವರು ಬೆಂಬಲ ನೀಡಿಲ್ಲ. ನಾನು ನನ್ನ ಮಗ ಹೋಗಿ ನಾಮಪತ್ರ ಸಲ್ಲಿಸಿ ಬಂದಿದ್ದೇವೆ. ರಾಜಕೀಯದಿಂದ ದೂರ ಇದ್ದು 8 ವರ್ಷ ಆಗಿದೆ. ಆದ್ರೆ ಈಗ ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಜನರು ಯಾರು ಮೂರ್ಖರಲ್ಲ. ಜನರಿಗೆ ಯಾರ ಮೇಲೆ ವಿಶ್ವಾಸವಿದೆಯೋ ಅವರಿಗೆ ಮತ ಹಾಕುತ್ತಾರೆ. ನಾನು ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಅಂತ ಟಿಎಂ ಹೊಸೂರು ಸುಮಲತಾ ಹೇಳಿದ್ದಾರೆ.