ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಹಾಲಸೋಮೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಜಾತ್ರೆ ವೇಳೆ ಪಲ್ಲಕ್ಕಿಯಲ್ಲಿ ಸಾಕಷ್ಟು ಮುಳ್ಳುಗಳನ್ನ ಹಾಕಿ ಗದ್ದುಗೆ ಮಾಡಿರುತ್ತಾರೆ. ಮುಳ್ಳಿನ ಗದ್ದುಗೆ ಮೇಲೆ ಹಾಲೇಶ್ವರ ಸ್ವಾಮೀಜಿ ಕುಣಿದಿದ್ದು, ಇದನ್ನ ನೋಡಲು ಜನಸಾಗರವೇ ಸೇರಿತ್ತು.
ಈ ಮುಳ್ಳುಗದ್ದುಗೆ ಪವಾಡ ನೋಡಲೆಂದು ಸುತ್ತಲಿನ ಗ್ರಾಮಗಳಾದ ಡೋಣಿ ತಾಂಡಾ, ಡಂಬಳ, ದಿಂಡೂರು, ಕದಾಂಪೂರ, ಪಾಪನಾಶಿ, ಹೀಗೆ ಸುತ್ತಲಿನ ಸಾವಿರಾರು ಜನ ಭಕ್ತರು ಆಗಮಿಸಿರುತ್ತಾರೆ. ಮುಳ್ಳು ಗದ್ದುಗೆ ಜಾತ್ರೆ ನಡೆಯುವ ವೇಳೆ ಮಕ್ಕಳಾಗದವರಿಗೆ ಉಡಿ ತುಂಬಿದ್ರೆ ಮಕ್ಕಳು ಆಗುತ್ತದೆ, ಕಂಕಣ ಕಟ್ಟಿದ್ರೆ ಮದುವೆಯಾಗುತ್ತದೆ, ರೋಗ-ರುಜಿನಗಳಿಂದ ಬಳಲುವವರು ತಿರ್ಥ ಸೇವಿಸಿದ್ರೆ ರೋಗ ಗುಣಮುಖವಾಗುತ್ತವೆ ಎಂಬ ನಂಬಿಕೆ ಈ ಭಕ್ತರದ್ದಾಗಿದೆ.
ಡೋಣಿ ಗ್ರಾಮದಲ್ಲಿ ಹಾಲಸೋಮೇಶ್ವರ ಜಾತ್ರೆ 21 ವರ್ಷಗಳಿಂದ ನಡೆಯುತ್ತಿದೆ. ಮಠದ ಪೀಠಾಧಿಪತಿ ಹಾಲೇಶ್ವರ ಸ್ವಾಮೀಜಿ ಮೊದಲು 11 ದಿನಗಳವರೆಗೆ ಗವಿಯಲ್ಲಿ ಕುಳಿತು ತಪಸ್ಸು ಮಾಡ್ತಾರೆ. ಜಾತ್ರೆಯ ದಿನದಂದು ರಾತ್ರಿ ವೇಳೆ ಗವಿಯಿಂದ ಹೊರಬಂದು ಮುಳ್ಳು ಪಲ್ಲಕ್ಕಿಯ ಗದ್ದುಗೆ ಏರಿ ಜನರಲ್ಲಿ ಭಕ್ತಿ ಮೂಡಿಸುತ್ತಾರೆ ಅಂತ ಹಿರೆಹಡಗಲಿ ಅಭಿನವ ಹಾಲಕೇರಿ ಸ್ವಾಮೀಜಿ ತಿಳಿಸಿದ್ದಾರೆ.