ನವದೆಹಲಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಎಲ್ಲಿದ್ದಾನೆ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ನಿತ್ಯಾನಂದ ದೇಶದಲ್ಲಿ ಅಡಗಿ ಕುಳಿತಿರಬಹುದು ಅಥವಾ ನೇಪಾಳ ಮೂಲಕ ಭಾರತವನ್ನು ತೊರೆದಿರಬಹುದು ಎಂದು ವರದಿಗಳು ತಿಳಿಸಿವೆ.
ನಿತ್ಯಾನಂದನಿಗೆ ಸೇರಿದ ಅಹಮದಾಬಾದ್ನ ಆಶ್ರಮದಿಂದ ಇಬ್ಬರು ಬಾಲಕಿಯರು ಸೇರಿದಂತೆ ಮೂವರು ಅಪ್ರಾಪ್ತ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಮಕ್ಕಳ ಪೋಷಕರು ಗುಜರಾತ್ ಪೊಲೀಸರು ದೂರು ನೀಡಿದ್ದಾರೆ. ಈ ಸಂಬಂಧ ನಿತ್ಯಾನಂದನ ವಿರುದ್ಧ ಮಕ್ಕಳ ಮೇಲೆ ದೌರ್ಜನ್ಯ ಮತ್ತು ಅಪಹರಣ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ
2010ರಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣದ ಸಂಬಂಧ 2011ರಲ್ಲಿ ನಿತ್ಯಾನಂದನ ಪಾಸ್ಪೋರ್ಟ್ ವಶಕ್ಕೆ ಪಡೆಯಲಾಗಿತ್ತು. ಆದಾಗ್ಯೂ, ಧ್ಯಾನ ಮತ್ತು ಯೋಗ ಶಿಬಿರಗಳನ್ನು ನಡೆಸಲು ಮಾನಸರೋವರ್ ಹಾಗೂ ಇತರ ಸ್ಥಳಗಳಿಗೆ ಪ್ರಯಾಣಿಸಲು ನಿತ್ಯಾನಂದ ತನ್ನ ಪಾಸ್ಪೋರ್ಟ್ ಕೇಳಿದ್ದ. ಇದರಿಂದಾಗಿ ಪಾಸ್ಪೋರ್ಟ್ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ನಾನು ಹೇಳಿದ್ದಕ್ಕೆ ತಡವಾಗಿ ಉದಯಿಸಿದ – ಸೂರ್ಯನಿಗೆ ನಿತ್ಯಾನಂದ ಆರ್ಡರ್
ವರದಿಗಳ ಪ್ರಕಾರ, ನಿತ್ಯಾನಂದ 2018ರ ಆಗಸ್ಟ್ ನಿಂದ ಯಾವುದೇ ಆಶ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ನೇಪಾಳದ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ನಿತ್ಯಾನಂದನ ಪಾಸ್ಪೋರ್ಟ್ ಅವಧಿ ಸೆಪ್ಟೆಂಬರ್ 2018ರಲ್ಲಿ ಮುಕ್ತಾಯಗೊಂಡಿದ್ದು, ಅತ್ಯಾಚಾರ ಪ್ರಕರಣದಿಂದಾಗಿ ನವೀಕರಿಸಲಾಗಿಲ್ಲ. ಹೀಗಾಗಿ ನೇಪಾಳದ ಮೂಲಕ ಈಕ್ವೆಡಾರ್ಗೆ ತೆರಳಿರಬಹುದು ಎಂದು ಶಂಕಿಸಲಾಗಿದೆ. ಈ ಮಧ್ಯೆ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಕಾಣಿಸಿಕೊಂಡ ನಿತ್ಯಾನಂದ, ಭಾರತದಲ್ಲಿಯೇ ಇದ್ದೇನೆ ಎಂದು ಹೇಳಿದ್ದಾನೆ. ಆದರೆ ಸ್ಥಳದ ಬಗ್ಗೆ ಸ್ಪಷ್ಟನೆ ನೀಡಿಲ್ಲ.
2010ರಲ್ಲಿ ನಿತ್ಯಾನಂದನನ್ನು ಒಳಗೊಂಡ ಸೆಕ್ಸ್ ಟೇಪ್ ಬಿಡುಗಡೆಯಾದಾಗ ಆತನು ಪರಾರಿಯಾಗಿದ್ದ. ಆದರೆ ಕೆಲ ದಿನಗಳ ಬಳಿಕ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪತ್ತೆಯಾಗಿದ್ದ. ಹೀಗಾಗಿ ಈಗಲೂ ಭಾರತದಲ್ಲಿರಬಹುದು ಎಂಬ ಊಹಾಪೋಹಗಳಿಗೆ ಕೇಳಿ ಬರುತ್ತಿವೆ.
ನಿತ್ಯಾನಂದನ ಆಶ್ರಮಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಇದೇ ಮೊದಲಲ್ಲ. 2008ರಲ್ಲಿ ಅಪ್ರಾಪ್ತ ಬಾಲಕನೊಬ್ಬ ಅನಾರೋಗ್ಯಕ್ಕೆ ಬಳಲುತ್ತಿದ್ದಾಗ ಆತನನ್ನು ನಿತ್ಯಾನಂದನ ಅನುಯಾಯಿಗಳು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕ, ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ವೈದ್ಯರಿಗೆ ಮಾಹಿತಿ ನೀಡಿದ್ದ.
ನಿತ್ಯಾನಂದ ಪ್ರಸ್ತುತ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಗುರುವಾರ ವಿದೇಶಾಂಗ ಸಚಿವಾಲಯ ಹೇಳಿದೆ. ಆತನ ಬಗ್ಗೆ ಗುಜರಾತ್ ಪೊಲೀಸರಿಂದ ಹಾಗೂ ಗೃಹ ವ್ಯವಹಾರ ಸಚಿವಾಲಯದಿಂದ (ಎಂಎಚ್ಎ) ಯಾವುದೇ ಮಾಹಿತಿ ಬಂದಿಲ್ಲ. ಅಹಮದಾಬಾದ್ನ ಹೊರವಲಯದಲ್ಲಿರುವ ನಿತ್ಯಾನಂದನ ಹಿರಾಪುರ ಆಶ್ರಮದಿಂದ ಮೂವರು ಅಪ್ರಾಪ್ತ ಮಕ್ಕಳನ್ನು (ಒಬ್ಬ ಹುಡುಗ ಮತ್ತು ಇಬ್ಬರು ಹುಡುಗಿಯರು) ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ನಿತ್ಯಾನಂದ ವಿರುದ್ಧ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.