ಉಡುಪಿ: ಪ್ರಧಾನಿ ನರೇಂದ್ರ ಮೋದಿ ಆಡಳಿತಾತ್ಮಕವಾಗಿ ಸುಭದ್ರ ಅಡಿಪಾಯ ಹಾಕಿದ್ದಾರೆ. ಅವರು ಕಟ್ಟುವ ಭಾರತವೂ ಬಲಿಷ್ಟವಾಗಿ ಹೊರ ಹೊಮ್ಮಲಿದೆ ಅಂತ ಉಜ್ಜಯಿನಿಯ ಸ್ವಾಮೀ ಗ್ಯಾನಾನಂದ್ ಮಹಾರಾಜ್ ಹೇಳಿದ್ದಾರೆ.
ಶ್ರೀಕೃಷ್ಣ ಮಠಕ್ಕೆ ಭೇಟಿಕೊಟ್ಟು ದೇವರ ದರ್ಶನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೃಷ್ಣನ ದರ್ಶನದಿಂದ ಮನಸ್ಸಿಗೆ ಬಹಳ ಖುಷಿಯಾಗಿದೆ. ಶ್ರೀಕೃಷ್ಣ ದ್ವಾರಕೆಯಿಂದ ಉಡುಪಿಗೆ ಬಂದಿದ್ದಾನೆ. ಮಧ್ವಾಚಾರ್ಯರಿಗೆ ಒಲಿದ ಶ್ರೀಕೃಷ್ಣ ಈತ, ನಾಲ್ಕೂ ದಿಕ್ಕುಗಳಿಂದ ಭಗವಂತ ದೇಶವನ್ನು ರಕ್ಷಣೆ ಮಾಡುತ್ತಿದ್ದಾನೆ ಎಂದು ಗ್ಯಾನಾನಂದ್ ಮಹಾರಾಜ್ ಹೇಳಿದರು.
ಕುರುಕ್ಷೇತ್ರದ ಗೀತ ಮಾನಿಷಿ ಆಶ್ರಮದ ಮಹಾಮಂಡಳೇಶ್ವರ್ ಆಗಿರುವ ಗ್ಯಾನಾನಂದ ಮಹಾರಾಜ್, ಉಡುಪಿ ಪ್ರವಾಸದಲ್ಲಿದ್ದಾರೆ. ಉಡುಪಿ ಕೃಷ್ಣಮಠಕ್ಕೆ ಆಗಮಿಸಿದ ಅವರು, ಕನಕನ ಕಿಂಡಿಯ ಮೂಲಕ ಮತ್ತು ಕನಕ ನವಗ್ರಹ ಕಿಂಡಿಯ ಮೂಲಕ ಕಡೆಗೋಲು ಕೃಷ್ಣನ ದರ್ಶನ ಮಾಡಿದರು. ಅಷ್ಟೇ ಅಲ್ಲದೇ ಮುಖ್ಯಪ್ರಾಣ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಭಾರತ ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಭಾರತ ಎಂಬ ಕಟ್ಟಡದ ಅಡಿಪಾಯ ಚೆನ್ನಾಗಿದ್ದರೆ ದೇಶದ ನಿರ್ಮಾಣ ಚೆನ್ನಾಗಿಯಾಗುತ್ತದೆ. ಮೋದಿ ಆ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆಗಳು ಬರಲಾರವು ಎಂದು ಅವರು ಹೇಳಿದರು.