ಬೆಂಗಳೂರು: ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 11 ವರ್ಷದ ಬಾಲಕಿಯ ಶವ ಪತ್ತೆಯಾದ ಬೆನ್ನಲ್ಲೇ ಇದೀಗ 15 ವರ್ಷದ ಮತ್ತೊಬ್ಬ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
11 ವರ್ಷದ ಪೂಜಾಳ ಶವ ನಗರದ ಬಾಗಲಗುಂಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಇತ್ತ ರಾಜಗೋಪಾಲ ನಗರದಲ್ಲಿ 15 ವರ್ಷದ ಜ್ಯೋತಿಯ ಶವ ದೊರೆತಿದೆ.
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಜ್ಯೋತಿಯ ಶವ ಪತ್ತೆಯಾಗಿದೆ. ಈಕೆ ರಾಯಚೂರು ಮೂಲದ ಪಾರ್ತತಮ್ಮ ಮತ್ತು ಬುಗ್ಗಪ್ಪ ದಂಪತಿಯ ಪುತ್ರಿಯಾಗಿದ್ದು, ರಾಜಗೋಪಾಲನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಅಲ್ಪನಾಥ್ ಎಂಬವರ ಮನೆಯಲ್ಲಿ ಜ್ಯೋತಿ ಕೆಲಸ ಮಾಡುತ್ತಿದ್ದು, ಇಂದು ಮನೆಯ ಸಂಪ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಬೆಳಗ್ಗೆ ಮನೆ ಕೆಲಸಕ್ಕೆ ಬಂದಿದ್ದ ವೇಳೆ ಸಂಪ್ಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಬಾಲಕಿ ಬಿದ್ದ ನಂತರ ಸಂಪ್ ಬಾಗಿಲು ಮುಚ್ಚಿ ಬೀಗ ಹಾಕಲಾಗಿದೆ. ಹೀಗಾಗಿ ಸಂಪ್ ಡೋರ್ ತೆಗೆಯಿರಿ ಎಂದರೂ ಮನೆಯ ಮಾಲೀಕ ತೆಗೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ನಂತರ ಸ್ಥಳೀಯರು ಮತ್ತು ಪೊಲೀಸರಿಂದ ಸಂಪ್ ಬಾಗಿಲು ತೆರೆದು ಪರಿಶೀಲನೆ ನಡೆಸಲಾಯಿತು. ಸಂಪ್ ನಿಂದ ಮಗುವಿನ ಮೃತದೇಹವನ್ನ ಮೇಲೆತ್ತಲು ಹೋದಾಗ ಪೊಲೀಸರು ಬಂದ ನಂತರ ಎತ್ತಿ ಎಂದು ಮನೆ ಮಾಲೀಕ ಹೇಳಿದ್ದಾನೆ. ಹೀಗಾಗಿ ಪೊಲೀಸರು ಬರೋದಕ್ಕೂ ಮೊದಲೇ ಎತ್ತಿದ್ರೆ ಮಗು ಬದುಕುತ್ತಿತ್ತು ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.
ಸದ್ಯ ಬಾಲಕಿಯ ಮೃತ ದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಂಪ್ ಬಾಗಿಲು ಮುಚ್ಚಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆಯಲ್ಲಿ ಪೂಜಾಳನ್ನು ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಎಂದು ಪೋಷಕರ ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು ಭಾರೀ ಚರ್ಚೆಗೆ ಒಳಗಾಗಿದೆ.