ವಿಶಾಖಪಟ್ಟಣ: 19 ವರ್ಷದ ನವವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.
ಗಂಡನೊಂದಿಗೆ ಜಗಳವಾಡಿದ ಕಾರಣ ಶನಿವಾರ ರಾತ್ರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ. ಆದ್ರೆ ಗಂಡನೇ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ವಿಶಾಖಪಟ್ಟಣ ಬಳಿಯ ಎಲ್ಬಿ ಪುರಂನವರಾದ ಸಂಧ್ಯಾ ನಾಲ್ಕು ತಿಂಗಳ ಹಿಂದಷ್ಟೇ ವೈಜಾಗ್ ಸ್ಟೀಲ್ ಪ್ಲಾಂಟ್ ನೌಕರನಾದ ರಾಜು ಎಂಬವರೊಂದಿಗೆ ಮದುವೆಯಾಗಿದ್ದರು. ಗಜುವಾಕಾದ ಬಾಡಿಗೆ ಫ್ಲಾಟ್ನಲ್ಲಿ ದಂಪತಿ ವಾಸವಿದ್ದರು. ಶನಿವಾರದಂದು ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿತ್ತು. ವಾಗ್ವಾದದ ಬಳಿಕ ರಾಜು ಮನೆಯಿಂದ ಹೊರಹೋಗಿದ್ದು ರಾತ್ರಿ ಮನೆಗೆ ವಾಪಸ್ ಬಂದು ನೋಡಿದಾಗ ಸಂಧ್ಯಾ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಪತ್ನಿಯನ್ನ ಕೂಡಲೇ ರಾಜು ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಲ್ಲಿಂದ ಕೆಜಿಹೆಚ್ ಆಸ್ಪತ್ರೆಗೆ ರವಾನಿಸಲು ವೈದ್ಯರು ಹೇಳಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿ ಸಂಧ್ಯಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹವನ್ನ ತವರೂರಿಗೆ ತೆಗೆದುಕೊಂಡು ಹೋಗಲಾಗಿದೆ. ಆದ್ರೆ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಕೈ ಮುರಿದಿರುವುದನ್ನು ನೋಡಿ, ರಾಜು ಆಕೆಯ ಮೇಲೆ ದಾಳಿ ಮಾಡಿ ಕೊಂದಿದ್ದಾನೆ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.