ಯಾದಗಿರಿ: ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆಯಾದ ಬೆನ್ನಲ್ಲೇ ಇದೀಗ ಯಾದಗಿರಿಯ ಎರಡು ಪ್ರತ್ಯೇಕ ಕಡೆಗಳಲ್ಲಿ ಅನುಮಾನಾಸ್ಪದ ಬ್ಯಾಗ್ ಗಳು ಮತ್ತು ವಸ್ತುಗಳು ಪತ್ತೆಯಾಗಿದ್ದು, ಜನರನ್ನು ಭಯ ಭೀತಿಗೊಳಿಸಿದೆ.
ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಅಜೀಜ್ ಕಾಲೋನಿಯಲ್ಲಿ ಬ್ಯಾಗ್ ಗಳು ಪತ್ತೆಯಾಗಿದ್ದು ಜನರು ಆತಂಕಗೊಂಡಿದ್ದರು. ಬೆಳಗ್ಗೆ 7 ಗಂಟೆಯಿಂದ ಬಸ್ ನಿಲ್ದಾಣದಲ್ಲಿ ಅಪರಿಚಿತ ಕಪ್ಪು ಬ್ಯಾಗ್ ಕಂಡು ಜನರು ಆತಂಕಪಟ್ಟಿದ್ದರು.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಬ್ಯಾಗ್ ಸುತ್ತಲೂ ಜನರ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಬಳಿಕ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಭದ್ರತಾ ಪಡೆ ಬ್ಯಾಗ್ ಪರಿಶೀಲಿಸಿ ಸಾರ್ವಜನಿಕರ ಆತಂಕ ದೂರ ಮಾಡಿದರು. ಇದನ್ನೂ ಓದಿ: ‘ತುಳು ಭಾಷೆಯಲ್ಲಿ ಮಾತನಾಡುತ್ತಿದ್ದ’- ಶಂಕಿತ ವ್ಯಕ್ತಿಯ ಬಗ್ಗೆ ಆಟೋ ಚಾಲಕ ಹೇಳಿದ್ದೇನು?
ಒಂದು ಬ್ಯಾಗ್ ನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯ ಐಡಿ ಕಾರ್ಡ್ ಜೆರಾಕ್ಸ್, 5 ಸಾವಿರ ನಗದು ಮತ್ತು ಬಟ್ಟೆ ಇದ್ದರೆ ಮತ್ತೊಂದು ಬ್ಯಾಗಿನಲ್ಲಿ ಶಾಲಾ ಪಠ್ಯ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ಮಂಗ್ಳೂರಲ್ಲಿ ಬಾಂಬ್ ಪತ್ತೆ – ರಿಕ್ಷಾದಲ್ಲಿ 19 ಕಿ.ಮೀ ಪ್ರಯಾಣ, ಮತ್ತೊಂದು ಬ್ಯಾಗ್ನಲ್ಲಿ ಏನಿತ್ತು?
ಸಾರ್ವಜನಿಕರು ಆತಂಕಗೊಳ್ಳದೆ ಶಂಕಿತ ವ್ಯಕ್ತಿಗಳು ಮತ್ತು ವಸ್ತುಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.