ನವದೆಹಲಿ: ಅಮಾನತಾಗಿರುವ ಲೋಕಸಭೆಯ (Loksabha) 95 ಹಾಗೂ ರಾಜ್ಯಸಭೆಯ (Rajyasabha) 46 ಒಟ್ಟು 141 ಮಂದಿ ಸಂಸದರು ಸಂಸತ್ತಿನ ಚೇಂಬರ್, ಲಾಬಿ ಹಾಗೂ ಗ್ಯಾಲರಿಗೆ ಪ್ರವೇಶಿಸುವಂತಿಲ್ಲ ಎಂದು ಲೋಕಸಭಾ ಕಚೇರಿಯಿಂದ (Loksabha Office) ಸುತ್ತೋಲೆ ಹೊರಡಿಸಲಾಗಿದೆ.
ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ (Security breach in Lok Sabha) ಕುರಿತ ಚರ್ಚೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿನ ವಿವಿಧ ಪಕ್ಷಗಳ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಈ ಬೆನ್ನಲ್ಲೇ ಲೋಕಸಭೆಯ ಸಚಿವಾಲಯ ಈ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಅಶಿಸ್ತಿನ ವರ್ತನೆ, 49 ಸಂಸದರ ಅಮಾನತು – ಇಲ್ಲಿಯವರೆಗೆ 149 ಮಂದಿ ಸಸ್ಪೆಂಡ್
ಸುತ್ತೋಲೆಯಲ್ಲಿ ಏನಿದೆ..?: ಅಮಾನತುಗೊಂಡ ಎಲ್ಲಾ ಸಂಸದರಿಗೆ ಸಂಸತ್ತಿನ ಮೊಗಸಾಲೆ, ಕೋಣೆ ಹಾಗೂ ಗ್ಯಾಲರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ಸಂಸದೀಯ ಸಮಿತಿಯ ಸಭೆಗೆ ಹಾಜರಾಗಲು ಅವರಿಗೆ ಅವಕಾಶವಿರಲ್ಲ. ಅಮಾನತು ಅವಧಿಯಲ್ಲಿ ಯಾವುದೇ ಸೂಚನೆಗಳನ್ನು ನೀಡುವಂತಿಲ್ಲ, ಸಮಿತಿಗಳಿಗೆ ನಡೆಯುವ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಅಧಿವೇಶನದ ಉಳಿದ ಅವಧಿಗೆ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಿದರೆ, ಅವರು ಅಮಾನತು ಅವಧಿಯಲ್ಲಿ ದೈನಂದಿನ ವೇತನದ ಭತ್ಯೆಗೂ ಅರ್ಹರಾಗಿರುವುದಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಸಂಸದರ ಅಮಾನತು – ಯಾವ್ಯಾವ ಅವಧಿಯಲ್ಲಿ ಎಷ್ಟು ಮಂದಿ ಸಸ್ಪೆಂಡ್?
ಡಿಸೆಂಬರ್ 13ರಂದು ಸಂಸತ್ ಭವನದಲ್ಲಿ ಸಂಭವಿಸಿದ್ದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಒತ್ತಾಯಿಸಿ, ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ವಿಪಕ್ಷಗಳ 49 ಸದಸ್ಯರನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಅಮಾನತುಗೊಳಿಸಿದ್ದರು. ಈ ಮೂಲಕ ಇದುವರೆಗೆ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 141 ಮಂದಿ ಸಂಸರು ಅಮಾನತುಗೊಂಡಿದ್ದಾರೆ.