ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಿತ ಹೇಳಿಕೆ ನೀಡಿ ದೇಶದಲ್ಲಿ ಹಿಂಸಾಚಾರಕ್ಕೆ ಕಾರಣರಾದ ಬಿಜೆಪಿ ಉಚ್ಚಾಟಿತ ನಾಯಕಿ ನೂಪುರ್ ಶರ್ಮಾರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನಿಮ್ಮ ಹೇಳಿಕೆಗೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ಶರ್ಮಾಗೆ ಕೋರ್ಟ್ ತಾಕೀತು ಮಾಡಿದೆ.
ಪ್ರವಾದಿ ಬಗ್ಗೆ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆಗೆ ಗಲ್ಫ್ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ಹಿಂಸಾಚಾರಕ್ಕೂ ತಿರುಗಿದೆ. ಅನೇಕ ದುರ್ಘಟನೆಗಳು ನಡೆಯುತ್ತಿದೆ. ಇದಕ್ಕೆಲ್ಲ ನೂಪುರ್ ಶರ್ಮಾ ಕಾರಣ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಉದಯಪುರ ಟೈಲರ್ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಆಕೆಯ ಪ್ರಚೋದನಕಾರಿ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಆದರೆ ಆಕೆ ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ವಾಗ್ದಾಳಿ ನಡೆಸಿದ್ದಾರೆ.
ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿತು. ಆಕೆ ಬೆದರಿಕೆಗಳನ್ನು ಎದುರಿಸುತ್ತಿದ್ದಾಳೆ ಎಂದು ಆಕೆ ಪರ ವಕೀಲರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಚೇಂಜ್ ಮಾಡಿದ ಶಿಂಧೆ – ಬಾಳ್ ಠಾಕ್ರೆ ಫೋಟೋ ಜೊತೆಗೆ ಕೊಟ್ಟ ಸಂದೇಶವೇನು?
ನೂಪುರ ಶರ್ಮಾ ಬೇಜವಾಬ್ದಾರಿ ಹೇಳಿಕೆಯಿಂದಲೇ ಉದಯಪುರದ ಘಟನೆ ನಡೆದಿದೆ. ನೂಪುರ ಶರ್ಮಾ ಹೇಳಿಕೆ ಹಿಂತೆಗೆದುಕೊಂಡಿದ್ದು ಬಹಳ ತಡವಾಗಿ. ಶರ್ಮಾ ದೂರಿನ ಆಧಾರದ ಮೇಲೆ ಓರ್ವ ವ್ಯಕ್ತಿಯ ಬಂಧನವಾಗಿದೆ. ನೂಪುರ್ ಶರ್ಮಾ ಬಂಧನ ಏಕಾಗಿಲ್ಲ? ನೂಪೂರ್ ಶರ್ಮಾ ವಿರುದ್ಧ ಡಜನ್ ಎಫ್ಐಆರ್ ದಾಖಲಾದರೂ ಬಂಧನವಾಗಿಲ್ಲ ಎಂದು ಕೋರ್ಟ್ ಗರಂ ಆಗಿದೆ.
ದೇಶದಲ್ಲಿ ನಡೆಯುತ್ತಿರುವ ದುರ್ಘಟನೆಗೆ ನೂಪುರ್ ಶರ್ಮಾ ಹೊಣೆ. ಪಕ್ಷದ ವಕ್ತಾರೆ ಆದ ಕಾರಣದಿಂದ ಅಧಿಕಾರ ನೆತ್ತಿಗೇರಿದೆ. ನೂಪೂರ್ ಶರ್ಮಾ ಧಾರ್ಮಿಕ ವ್ಯಕ್ತಿಯಲ್ಲ. ವಿವಿಧ ಧರ್ಮದವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ. ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗಿದೆ. ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರದ ಹೊಣೆಯನ್ನು ಅವರೇ ಹೊರಬೇಕು ಎಂದು ಹೇಳಿದೆ.