ಯಾದಗಿರಿ: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣರನ್ನು (Prajwal Revanna) ಜೆಡಿಎಸ್ ಪಕ್ಷದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ (Sharana Gowda Kandakur) ಒತ್ತಾಯ ಮಾಡಿದ್ದಾರೆ.
ಈ ಸಂಬಂಧ ಪಕ್ಷದ ವರೀಷ್ಠ ಹೆಚ್.ಡಿ.ದೇವೇಗೌಡರಿಗೆ ಪತ್ರ ಬರೆದಿರುವ ಶಾಸಕರು, ಅತ್ಯಂತ ಹಿರಿಯರಾದ ತಮಗೆ ನಾನು ಸಲಹೆ ಕೊಡುವಷ್ಟು ದೊಡ್ಡವನಲ್ಲ. ನಾನು ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ವ್ಯಕ್ತಪಡಿಸ್ತಿದ್ದೇನೆ ಎಂದು ಹೇಳುತ್ತಾ ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ..?: ಕೆಲದಿನಗಳಿಂದ ರಾಜ್ಯಾದ್ಯಂತ ಹರಿದಾಡ್ತಿರುವ ಕೆಲ ಅಶ್ಲೀಲ ವೀಡಿಯೋ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಆ ವೀಡಿಯೋದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ರೇವಣ್ಣ ತಪ್ಪಿಸ್ಥರೆಂದು ಭಾವನೆ ಉಂಟಾಗಿದೆ. ಹೀಗಾಗಿ ಕೂಡಲೇ ಅವರನ್ನ ಪಕ್ಷದಿಂದ ಅಮಾನತು ಮಾಡಬೇಕು. ಇದನ್ನೂ ಓದಿ: ಪ್ರಜ್ವಲ್ ಪೆನ್ಡ್ರೈವ್ ಕೇಸ್- ಕುಟುಂಬದ ಹೆಸರು ಯಾಕೆ ತರ್ತೀರಾ ಅಂತಾ ಹೆಚ್ಡಿಕೆ ಕಿಡಿ
ಪ್ರಧಾನಿಯಾದ ಮೊದಲ ಕನ್ನಡಿಗ ಎಂಬ ಅಭಿಮಾನ ತಮ್ಮದಾಗಿದೆ. ಹೆಣ್ಣು ಸಾಕ್ಷಾತ್ ಕಪಿಲ ಸಿದ್ದರಾಮ ಮಲ್ಲಿಕಾರ್ಜುನ ಎಂಬ ಶರಣರ ವಾಣಿಯಂತೆ ಹೆಣ್ಣು ಮಕ್ಕಳನ್ನ ಅತ್ಯಂತ ಗೌರವದಿಂದ ನೋಡಿಕೊಂಡು ಬಂದಿದ್ದೀರಿ. ತಮ್ಮ ಪಕ್ಷದ ಚಿಹ್ನೆಯೂ ತೆನೆ ಹೊತ್ತ ಮಹಿಳೆಯಾಗಿದ್ದು, ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನ ಇದು ಪ್ರತಿನಿಧಿಸುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪರಂಪರೆ ಹೊಂದಿರುವ ಪಕ್ಷಕ್ಕೆ ವೀಡಿಯೋ ಪ್ರಕರಣ ತೀವ್ರ ಮುಜುಗರ ತಂದಿರುವುದಂತೂ ಸುಳ್ಳಲ್ಲ. ತಾವು ಪಕ್ಷದಲ್ಲಿ ಆಂತರಿಕ ಸಮಿತಿ ರಚನೆ ಮಾಡಿ. ತಾಯಂದಿರಿಗೆ ಅದರ ಸತ್ಯ ಗೊತ್ತು ಮಾಡುವಂತಾಗಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.