ರಾಮನಗರ: ರಾಜ್ಯದಲ್ಲಿ ವಿದ್ವಂಸಕ ಕೃತ್ಯ ಎಸಗಲು ರೂಪುರೇಷೆ ರೂಪಿಸುತ್ತಾ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಶಂಕಿತ ಉಗ್ರನನ್ನ ರಾಮನಗರದಲ್ಲಿ ರಾತ್ರಿ ಇಂಟಲಿಜೆನ್ಸ್ ಬ್ಯುರೋ(ಐಬಿ), ರಾಷ್ಟ್ರೀಯ ತನಿಖಾ ದಳ(ಎನ್ಐಎ) ಮತ್ತು ದೆಹಲಿ ಪೊಲೀಸರು ಬಂಧಿಸಿದ್ದಾರೆ.
25 ವರ್ಷದ ಮುನೀರ್ ಬಂಧಿತ ಶಂಕಿತ ಉಗ್ರ. ಇದೀಗ ಸ್ಥಳೀಯ ರಾಮನಗರ ಪೊಲೀಸರಿಂದ ಸಹಕಾರದಿಂದ ಐಬಿ, ಎನ್ಐಎ, ದೆಹಲಿ ಪೊಲೀಸ್ ಈತನನ್ನು ಬಂಧಿಸಿದೆ.
ಈತ ತನ್ನ ಕುಟುಂಬದ ಜೊತೆ ರಾಮನಗರದ ರೆಹಮಾನಿಯಾ ನಗರದ ರಫೀಕ್ ಖಾನ್ ಅವರ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದನು. ರಾತ್ರಿ ಮುನೀರ್ನನ್ನ ಬಂಧಿಸಿದ ಪೊಲೀಸ್ರು ಆತನಿಂದ ಲ್ಯಾಪ್ಟಾಪ್, ಜಿಲೇಟಿನ್ ಪುಡಿ, ರಾಜ್ಯದ ಪ್ರವಾಸಿತಾಣಗಳು, ಮ್ಯಾಪ್ ಹಾಗೂ ದೇಗುಲ, ಮಸೀದಿಗಳ ಚಿತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮನೆ ಮಾಲೀಕ ರಫೀಕ್ ಖಾನ್ ಮಾಧ್ಯಮದ ಜೊತೆ ಮಾತನಾಡಿ, ಮುನೀರ್ ಗೆ 50 ಸಾವಿರ ಮುಂಗಡ ಹಾಗೂ 5 ಸಾವಿರ ಬಾಡಿಗೆಗೆ ಮನೆ ನೀಡಲಾಗಿತ್ತು. ಮೂರು ಬಾರಿ ಮುಂಗಡ ಹಣವನ್ನ ಕಂತಿನ ರೂಪದಲ್ಲಿ ನೀಡಿದ್ದನು. ಅಗ್ರಿಮೆಂಟ್ ಗಾಗಿ ಆಧಾರ್ ಕಾರ್ಡ್ ಪಡೆದಿದ್ವಿ. 2-3 ದಿನದಲ್ಲಿ ಮನೆಯ ಅಗ್ರಿಮೆಂಟ್ ಮಾಡಿಕೊಳ್ಳುವುದಿತ್ತು. ಆತ ರೈಲ್ವೆ ಟಿಕೇಟ್ ಖರೀದಿ ಮಾಡಲು ಆಧಾರ್ ಕಾರ್ಡ್ ವಾಪಸ್ ಪಡೆದಿದ್ದ. ಸೈಕಲ್ನಲ್ಲಿ ಬೇರೆಡೆ ಹೋಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದನು. ಸ್ವಲ್ಪವೂ ಅನುಮಾನ ಬರದಂತೆ ನಡೆದುಕೊಳ್ಳುತ್ತಿದ್ದನು. ಆತ ಬಟ್ಟೆ ವ್ಯಾಪಾರಕ್ಕೆ ಹೊಗ್ತಿದ್ದ ವೇಳೆ ಆತನ ಪತ್ನಿ, ಮಕ್ಕಳು ಮನೆಯಲ್ಲಿಯೇ ಇರುತ್ತಿದ್ದರು. ಎಲ್ಲರ ಜೊತೆ ಅನ್ಯೋನ್ಯವಾಗಿದ್ರು. ಅಲ್ಲದೇ ಯಾರೇ ಸಿಕ್ಕರು ನಮಸ್ಕಾರ ಮಾಡುತ್ತಿದ್ದನು. ಈತ ತಾನು ದೆಹಲಿಯವನು ಎಂದು ಹೇಳಿದ್ದು, ನಮಾಜ್ ಮಾಡುತ್ತಿದ್ದನು ಅಂತ ಹೇಳಿದ್ದಾರೆ.
ಸದ್ಯ ಬಂಧಿತ ಮುನೀರ್ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews